ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರು (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ) ಅರ್ಜಿ ಸಲ್ಲಿಸಬಹುದು.
ಯಾವುದಕ್ಕೆ ಸಹಾಯಧನ ಹಾಗೂ ಸಾಲ ಸೌಲಭ್ಯ ಲಭ್ಯವಿದೆ?
ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿಯಲ್ಲಿ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯದ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.
ಸಹಾಯಧನ ಹಾಗೂ ಸಾಲ ಸೌಲಭ್ಯ
ಘಟಕದ ವೆಚ್ಚ 50 ಸಾವಿರ ರೂಪಾಯಿಯಾಗಿದ್ದರೆ ಶೇ. 30 ರಷ್ಟು ಗರಿಷ್ಠ ಅಂದರೆ 10 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ ಶೇ. 70 ರಷ್ಟು ಹಣ ಅಂದರೆ 40 ಸಾವಿರ ರೂಪಾಯಿಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಘಟಕದ ವೆಚ್ಚ 50 ಸಾವಿರದಿಂದ 1 ಲಕ್ಷ ರೂಪಾಯಿಯವರೆಗೆ ಇದ್ದರೆ ಶೇ. 20 ರಷ್ಟು ಅಂದರೆ ಗರಿಷ್ಠ 20 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಶೇ. 80 ರಷ್ಟು ಹಣ ಅಂದರೆ 80 ಸಾವಿರ ರೂಪಾಯಿಗೆ ಶೇ. 4 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಘಟಕದ ವೆಚ್ಚ 1 ಲಕ್ಷದಿಂದ 2 ಲಕ್ಷರೂಪಾಯಿಯವರೆಗೆ ಇದ್ದರೆ ಶೇ. 15 ರಷ್ಟು ಅಂದರೆ ಗರಿಷ್ಠ 30 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಉಳಿದ ಶೇ. 85 ರಷ್ಟು ಹಣ ಅಂದರೆ 1,70 ಲಕ್ಷ ರೂಪಾಯಿ ಗಳನ್ನು ಶೇ. 4 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅರ್ಜಿದಾರರು ಈ
https://suvidha.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಿ ಸುವಿಧಾ ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ಆಗಸ್ಟ್ 24 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಸುವಿಧಾ ತಂತ್ರಾಂಶ ತೆರೆದುಕೊಳ್ಳುತ್ತದೆ. ಅಲ್ಲಿ ಅಭ್ಯರ್ಥಿಗಳು ಸೈನ್ ಇನ್ ಮೇಲೆ ಕ್ಲಿಕ್ ಮಾಡಿದ ನಂತರ ಓಟಿಪಿ ಬಳಸಿ ಲಾಗಿನ್ ಮಾಡಿ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಓಟಿಪಿ ಕೋರಿಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ಸಿಎಸ್.ಸಿ ಕೇಂದ್ರಗಳಯೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇರ ಸಾಲ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹತೆಗಳು
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 18 ರಿಂದ 55 ವಯೋಮಾನದೊಳಗಿರಬೇಕು. ಆಧಾರ್ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಖಾತೆ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಗ್ರಾಮಾಂತರ ಪ್ರದೇಶದ ಕುಟುಂಬದವರು ವಾರ್ಷಿಕ ವರಮಾನ 98 ಸಾವಿರ ರೂಪಾಯಿಗಳು, ಹಾಗೂ ನಗರ ಪ್ರದೇಶದವರಿಗೆ 1.20 ಲಕ್ಷ ರೂಪಾಯಿ ಒಳಗಿರಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 080 22374832, ಮೊಬೈಲ್ ಸಂಖ್ಯೆ 96060666389, 8824300400 ಅಥವಾ ಆಯಾ ಜಿಲ್ಲಾ ನಿಗಮದ ಕಚೇರಿಯಲ್ಲಿ ಸಂಪರ್ಕಿಸಬಹುದು.
Ok