ರೈತರ ಹೊಲದಲ್ಲಿಯೇ ಕೃಷಿ ಬೆಳೆಗಳಿಗೆ ತಗಲುವ ಕೀಟ, ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಾಗಿ ಕೃಷಿ ಇಲಾಖೆಯು ಕೃಷಿ ಸಂಜೀವೀನಿ ಯೋಜನೆಯನ್ನು ಆರಂಭಿಸಿದೆ. ರೈತರಿಗೆ ಅನುಕೂಲವಾಗಲೆಂದು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಕೃಷಿ ಸಂಜೀವಿನಿ ಎಂದರೇನು? ಕೃಷಿ ಸಂಜೀವಿನಿ ರಥ ಹೇಗೆ ಕೆಲಸ ಮಾಡಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೃಷಿ ಬೆಳೆಗಳಿಗೆ ತಗಲುವ ರೋಗ, ಕೀಟ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಶಗಳ ಕೊರತೆ ಸೇರಿದಂತೆ ವಿವಿಧ ಕೃಷಿ ಸಂಬಂಧಿತ ಕೆಲಸಕ್ಕೆ ರೈತರ ಜಮೀನಿನಲ್ಲೇ ವ್ಯವಸ್ಥೆ ಮಾಡಲು ಕೃಷಿ ಕೃಷಿ ಇಲಾಖೆಯು ಕೃಷಿ ಸಂಜೀವಿನಿ ಯೋಜನೆ ಆರಂಭಿಸಲಾಗಿದೆ.
ರೈತರ ಮನೆ ಮತ್ತು ಜಮೀನಿಗೆ ತೆರಳಿ ಮಳೆ, ತೇವಾಂಶ, ಮಣ್ಣು, ನೀರು, ಕೀಟಬಾಧೆ, ರೋಗ ಸೇರಿದಂತೆ ಇತರ ತಾಂತ್ರಿಕ ನೆರವು ಕೂಡ ಪಡೆಯಬಹುದು. ಅಲ್ಲದೆ ಈ ವಾಹನದಲ್ಲಿರುವ ಕೃಷಿ ಹೆಲ್ತ್ ಕ್ಲಿನಿಕ್ ಪರಿಹಾರ ಪಡೆಯಬಹುದು. ವಾಹನದಲ್ಲಿರುವ ತಾಂತ್ರಿಕ ತಂಡ ಜಮೀನಿನ ಸಮಗ್ರ ವೀಕ್ಷಣೆ, ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಲಿದೆ.
ಏನಿದು ಕೃಷಿ ಸಂಜೀವಿನಿ? (what is krishi sanjeevini van)
ಕೃಷಿಯು ನೈಸರ್ಗಿಕ ವಿಕೋಪ, ಅನಾವೃಷ್ಟಿ, ಅತೀವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ರೋಗ ಕೀಟಗಳ ಹತೋಟಿ, ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ.
ಜಮೀನಿನ ಮಣ್ಣು, ನೀರು ಪರೀಕ್ಷೆಗೆ ಪ್ರಯೋಗಾಲಯ, ಬೀಜ ಗೊಬ್ಬರಗಳ ಮಾಹಿತಿಗೆ ಇಲಾಖೆಯ ಅಧಿಕಾರಿಗಳ ಕಚೇರಿಗೆ ಅಲೆದಾಡಬೇಕಿದ್ದ ರೈತರು ಕುಳಿತಲ್ಲಿಯೇ ಸಹಾಯವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ನೇರವಾಗಿ ತಮ್ಮ ಜಮೀನಿಗೆ ವಾಹನ ತರಿಸಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಎಲ್ಲಾ ಮಾಹಿತಿ, ಪರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲಾಗಿದೆ.
ಕೃಷಿ ಸಂಜೀವಿನಿಯ ಸಹಾಯವಾಣಿ (Krishi sanjeevani van contact number)
ರೈತರು ಈ ವಾಹನದ ಪ್ರಯೋಜನ ಪಡೆಯಲು ಉಚಿತ ಸಹಾಯವಾಣಿ 155313 ಗೆ ಕರೆ ಮಾಡಿದರೆ ಆ ಕರೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗಲಿದೆ. ಅಲ್ಲಿಂದ ಸಂಪರ್ಕಿಸಿದ ರೈತರ ಜಮೀನುಗಳಿಗೆ ತೆರಳಿ ಎಲ್ಲಾ ಮಾಹಿತಿ ನೀಡಲಾಗುವುದು. ಈ ಕೃಷಿ ಸಂಜೀವಿನಿ ರಥ ಹೋಬಳಿ ಮಟ್ಟದ ವಿವಿಧ ಗ್ರಾಮದಲ್ಲಿ ಸಂಚಾರ ನಡೆಸುತ್ತಿದ್ದು,ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಸಂಚಾರಿ ಚಿಕಿತ್ಸಾಲಯದಲ್ಲಿ ಏನಿರಲಿದೆ?
ಜಿಲ್ಲೆಯ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನದಲ್ಲಿ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟಿರಿಯೋ ಜೂಮ್ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್, ಮಣ್ಣು ತೇವಾಂಶ ಸಂವೇದಕ, ಕೀಟ, ಸಂಗ್ರಹಣಾ ಬಲೆ, ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣಾ ಕೈಗೊಳ್ಳಲು ಟ್ಯಾಬ್ಸ್, ಲ್ಯಾಪ್ ಟಾಪ್, ಪ್ರಿಂಟರ್, ಉಷ್ಣಮಾಪಕ ಸೇರಿ ವಿವಿಧ ಉಪಕರಣಗಳು ವಾಹನದಲ್ಲಿರುತ್ತದೆ. ಕೃಷಿ ಸಂಜೀವಿನ ವಾಹನದಲ್ಲಿ ಎಲ್ಲಾ ಉಪಕರಣಗಳು ಇರುವುದರಿಂದ ರೈತರ ಹೊಲದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.