ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಡಿಸೆಂಬರ್ 3 ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ ತಿಂಗಳಲ್ಲಿ ಮಳೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಮತ್ತೆ ಮಳೆಯ ಆತಂಕ ಎದುರಾಗಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದರಿಂದ ರೈತರಿಗೆ ಆತಂಕ ಎದುರಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಮಂಡ್ಯ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿಯೂ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನಲ್ಲಿ ಡಿಸೆಂಬರ್ 2 ರವರೆಗೆ ಮಳೆಯಾಗಲಿದೆ.
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಡಿಸೆಂಬರ್ 2 ರಂದು ಸಾಧಾರಣ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ಮಳೆಯ ಲಕ್ಷಣವಿಲ್ಲ. ಉಥ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು. ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಕಲಬಬುರಗಿ ಜಿಲ್ಲೆಯಲ್ಲಿ ಸೋಮವಾರದಿಂದ ಮೋಡ ಕವಿದ ವಾತಾವರಣವಿತ್ತು. ಮಂಗಳವಾರವೂ ಮೋಡ ಕವಿದ ವಾತಾವರಣ ಹಾಗೂ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ತುಂತುರು ಮಳೆಯಾಯಿತು.
ತುಂತುರು ಮಳೆ ತಂದ ಆತಂಕ
ಕಲಬುರಗಿ ಜಿಲ್ಲೆ ಸೇರಿದಂತೆ ಯಾದಗಿರಿ, ಬೀದರ್, ರಾಯೂಚುರು ಜಿಲ್ಲೆಗಳಲ್ಲಿ ಕಂಡುಬಂದ ಮೋಡ ಕವಿದ ವಾತಾವರಣ ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಕೋಯ್ಲು ಮಾಡಿದ ರೈತರ ಧಾನ್ಯ ಒಣಗಿಸಲು ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲ, ತೊಗರಿ ರಾಶಿ ಮಾಡುವ ರೈತರಿಗೆ ಆತಂಕ ಎದುರಾಗಿದೆ. ಈಗಾಗಲೇ ನವೆಂಬರ್ ಆರಂಭದಲ್ಲಿ ಉಂಟಾದ ವಾತಾವರಣ ವೈಪರೀತ್ಯದಿಂದಾಗಿ ತೊಗರಿ ಬೆಳೆಯ ಹೂವು ಉದುರಿ ಇಳುವರಿಗೆ ಹೊಡೆತ ಬಿದ್ದಿದೆ. ಈಗಿರುವ ವಾತಾವರಣದಿಂದ ಇದ್ದ ಹೂವು ಉದುರಿ ಹಾಕಿದ ಖರ್ಜು ಬರದ ಪರಿಸ್ಥಿತಿಯಲ್ಲಿದ್ದಾರೆ.