ಸಾವಯವ ಗೊಬ್ಬರ ತಯಾರಿಸಿಕೊಳ್ಳಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ.  ವೇಸ್ಟ್ ಡಿಕಂಪೋಸರ್ (waste decomposer) ಎಂಬ ಸೂಕ್ಷ್ಮಾಣುಜೀವಿ ದ್ರಾವಣದಿಂದ ಸುಲಭವಾಗಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಬಹುದು. ಹೌದು, ದೆಹಲಿಯ ಕೇಂದ್ರೀಯ ಸಾವಯವ ಕೃಷಿ ಕೇಂದ್ರವು ವೇಸ್ಟ್ ಡಿಕಂಪೋಸರ್ ಎಂಬ ಸೂಕ್ಷ್ಮಾಣುಜೀವಿ ದ್ರಾವಣವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಬೆಳೆಗಳ ಇಳುವರಿ ಹೆಚ್ಚಿಸಲು, ಮಣ್ಣಿನ ಫಲವತ್ತತೆ ಉತ್ಕೃಷ್ಟಗೊಳಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ ಬೀಜೋಪಚಾರಕ್ಕೂ ಬಳಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ವೇಸ್ಟ್ ಡಿಕೋಂಪರ್ ತಯಾರಿಸುವ ವಿಧಾನ (How to prepare waste decomposer)

200 ಲೀಟರ್ ನೀರನ್ನು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ 2 ಕೆ.ಜಿ ಬೆಲ್ಲವನ್ನು ಕರಗಿಸಬೇಕು. ಬಳಸುವ ಬೆಲ್ಲ ಸಾವಯವದ್ದಾಗಿದ್ದರೆ ಇನ್ನೂ ಉತ್ತಮ. ಈ ಮೇಲಿನ ಮಿಶ್ರಣಕ್ಕೆ 30 ಗ್ರಾಂ (1 ಬಾಟಲಿ) ತ್ಯಾಜ್ಯ ವಿಭಜಕವನ್ನು ಮಿಶ್ರಣ ಮಾಡಬೇಕು. ಶೀಷೆಯಲ್ಲಿರುವ 30 ಮಿ.ಲೀಟರ್ ವೇಸ್ಟ್ ಡಿಕಂಪೋಸರ್ ನ್ನು ಡ್ರಮ್ ನಲ್ಲಿರುವ ದ್ರಾವಣಕ್ಕೆ ಪೂರ್ತಿ ಸುರಿಯಬೇಕು. ಕೈಯಿಂದ ಮುಟ್ಟಬಾರದು. (ತ್ಯಾಜ್ಯ ವಿಭಜಕವು ಮಾರುಕಟ್ಟೆಯಲ್ಲಿ 30 ಗ್ರಾಂ ಬಾಟಲಿಯಲ್ಲಿ ರೂ. 20/- ದರದಲ್ಲಿ ರಾಷ್ಟ್ರೀಯ ಅಥವಾ ಪ್ರಾದೇಶಿಕ ಸಾವಯವ ಕೃಷಿ ಕೇಂದ್ರಗಳಲ್ಲಿ ಸಿಗುತ್ತದೆ. ತ್ಯಾಜ್ಯ ವಿಭಜಕವನ್ನು ಭಾರತೀಯ ಕೃಷಿ ಅನುಸಂದಾನ ಸಂಸ್ಥೆಯು ಧೃಡೀಕರಿಸಿದ್ದು, ಒಂದು ಬಾಟಲಿ ತ್ಯಾಜ್ಯ ವಿಭಜಕದಿಂದ 10000 ಮೆಟ್ರಿಕ್ ಟನ್ ಜೈವಿಕ ತ್ಯಾಜ್ಯವನ್ನು 30 ದಿನಗಳಲ್ಲಿ ಕರಗಿಸಬಹುದು.)

ನೀರಿನಲ್ಲಿ ಕರಗಿಸಿದ ಬೆಲ್ಲದ ಮತ್ತು ತ್ಯಾಜ್ಯ ವಿಭಜಕ ಮಿಶ್ರಣವನ್ನು ಒಂದು ಮರದ ಕೋಲಿನಿಂದ ಚೆನ್ನಾಗಿ ಬೆರೆಸಬೇಕು. ಮಿಶ್ರಣವಿರುವ ಡ್ರಮ್‌ನ್ನು ಮರದ ಹಲಗೆಯಿಂದ ಗಟ್ಟಿಯಾಗಿ ಮುಚ್ಚಬೇಕು ಹಾಗೂ ಪ್ರತಿದಿನ ಒಂದು ಅಥವಾ ಎರಡು ಬಾರಿ ಕೋಲಿನಿಂದ ತಿರುಗಿಸಬೇಕು. ಏಳು ದಿನಗಳ ನಂತರ ಡ್ರಮ್ ನ ಮುಚ್ಚಳ ತೆಗೆಯಿರಿ. ಆಗ ದ್ರಾವಣದ ಮೇಲ್ಪದರದಲ್ಲಿ ಕೆನೆ ರೀತಿ ವಸ್ತು ಕಾಣುತ್ತದೆ. ಇದನ್ನೂ ಮೂರು ವರ್ಷ ಹೀಗೆ ಇಟ್ಟರೂ ಹಾಳಾಗುವುದಿಲ್ಲ.ಈ ದ್ರಾವಣವನ್ನು ಪುನ ಬಳಸಿ ಮತ್ತೆ 200 ಲೀಟರ್ ವೇಸ್ಟ್ ಡಿಕಂಪೋಸರ್  ದ್ರಾವಣ ಸಿದ್ದಗೊಳಿಸಬಹುದು.  ಒಂದು ಬಕೇಟ್ ನಲ್ಲಿ 20 ಲೀಟರ್ ವರೆಗೆ ಸಿದ್ದ ದ್ರಾವಣವನ್ನು ತೆಗೆದಿಟ್ಟುಕೊಂಡು ದ್ರಾವಣ ಸಿದ್ದಪಡಿಸಬಹುದು.

ತಯಾರಾಗಿರುವ ತ್ಯಾಜ್ಯ ವಿಭಜಕ ಮಿಶ್ರಣದಿಂದ 20 ಲೀಟರ್ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ 2 ಕೆ.ಜಿ. ಬೆಲವನ್ನ್ಲು 20 ಲೀಟರ್ ನೀರಿನಲ್ಲಿ ಕರಗಿಸಿ, ಆ ಮಿಶ್ರಣದಲ್ಲಿ ಬೆರೆಸಿ ನಂತರ ಉಪಯೋಗಿಸಬಹುದು. ಹಾಗೂ ರೈತರು ತಮ್ಮ ತೋಟದಲ್ಲಿಯೆ ಈ ರೀತಿಯ ತ್ಯಾಜ್ಯ ವಿಭಜಕ ಮಿಶ್ರಣವನ್ನು ನಿರಂತರವಾಗಿ ಸಿದ್ಧಪಡಿಸಿಕೊಳ್ಳಬಹುದು.

ಸಿದ್ದವಾದ ವೇಸ್ಟ್ ಡಿಕಂಪೋಸರ್ ದ್ರಾವಣವನ್ನು ತ್ಯಾಜ್ಯ ಕರಗಿಸಿ ಗೊಬ್ಬರವಾಗಿಸಲು, ಬೆಳೆಯ ಇಳುವರಿ ಹೆಚ್ಚಿಸಲು, ಮಣ್ಣಿನ ಫಲವತ್ತತೆ ಹೆಚ್ಚಿಸಲು, ಬೀಜೋಪಚಾರ, ಬೆಳೆಗಳಿಗೆ ಕೀಟ-ರೋಗ ಬಾಧೆ ನಿಯಂತ್ರಣಕ್ಕಾಗಿ ಬಳಸಬಹುದು.

ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ (Method of composting)

ಒಂದು ಟನ್ ಕಚ್ಚಾಗೊಬ್ಬರವನ್ನು (ತ್ಯಾಜ್ಯವನ್ನು) ನೆರಳಿನಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ತೆಳುವಾಗಿ (18 ರಿಂದ 20 ಸೆಂಟಿಮೀಟರ್ ದಪ್ಪ) ಹರಡಬೇಕು.   ಮೇಲೆ ತೆಳುವಾಗಿ ಹರಡಿರುವ ತ್ಯಾಜ್ಯದ  ಮೇಲೆ 20 ಲೀಟರ್ ತ್ಯಾಜ್ಯ ವಿಭಜಕ ಮಿಶ್ರಣವನ್ನು ಚಿಮುಕಿಸಬೇಕು. ತ್ಯಾಜ್ಯದಲ್ಲಿ ಸದಾ ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಇದರ ಮೇಲೆ ಮತ್ತೊಂದು ಪದರ ತ್ಯಾಜ್ಯವನ್ನು ತೆಳುವಾಗಿ ಹರಡಬಹುದು. 2ನೇ ಪದರದ ಕಚ್ಚಾ ಗೊಬ್ಬರದ ಮೇಲೆ 20 ಲೀಟರ್ ತ್ಯಾಜ್ಯ ವಿಭಜಕ ಮಿಶ್ರಣವನ್ನು ಚಿಮುಕಿಸಿ ಗೊಬ್ಬರ ತಯಾರಿಸಬಹುದು.

ಈ ಮೇಲಿನ ರೀತಿಯಲ್ಲಿ ಸಿದ್ಧಪಡಿಸಿರುವ ಕಚ್ಛಾಗೊಬ್ಬರದ ರಾಶಿಯನ್ನು ಪ್ರತಿ 7 ದಿನಗಳಿಗೊಮ್ಮೆ ಮಿಶ್ರಣ ಮಾಡಬೇಕು ಈ ವಿಧಾನದಿಂದ 30-40 ದಿನಗಳಲ್ಲಿ ಒಂದು ಟನ್ ಗೊಬ್ಬರವಾಗಿ ಪರಿವರ್ತಿತವಾಗಿರುತ್ತದೆ.

ತ್ಯಾಜ್ಯವಿಭಜಕವನ್ನು ಎಲ್ಲಾ ರೀತಿಯ ಬೆಳೆಗಳಿಗೂ ಏಳು ದಿನಗಳಿಗೊಮ್ಮೆ ಬಳಸಬಹುದು. ತರಕಾರಿ ಬೆಳೆಗಳಾದರೆ ಮೂರು ದಿನಕ್ಕೊಮ್ಮೆ, ಹಣ್ಣಿನ ಬೆಳೆಗಳಿಗಾದರೆ  ಏಳು ದಿನಗಳಿಗೊಮ್ಮೆ ಸಿಂಪಡಿಸಬಹುದು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.

ಒಂದು ಎಕರೆಗೆ ಬೇಕಾಗುವ 200 ಲೀಟರ್ ದ್ರಾವಣವನ್ನು ಹನಿ ನೀರಾವರಿ ಮೂಲಕ ಹರಿಸಿದರೆ ಮಣ್ಣು ಫಲವತ್ತಾಗಿ, ಬೆಳೆ ಇಳುವರಿಯೂ ಹೆಚ್ಚಾಗುತ್ತದೆ. ಬಿತ್ತನೆ ಬೀಜದ ಮೇಲೆ ದ್ರಾವಣವನ್ನು ಚಿಮುಕಿಸಿ ಚೆನ್ನಾಗಿ ಕಲಿಸಿ ನೆರಳಿನಲ್ಲಿ ಅರ್ಧ ಗಂಟೆ ಒಣಗಿಸಿ ನಂತರ ಬಿತ್ತಬಹುದು.

ಎಚ್ಚರಿಕೆಯಿರಲಿ:

ದ್ರಾವಣ ತಯಾರಿಕೆ ಕೆಟ್ಟ ವಾಸನೆ ಹೊರಹೊಮ್ಮುತ್ತಿದ್ದರೆ ವೇಸ್ಟ್ ಡಿಕಂಪೋಸರ್ ಕಲಬೆರೆಕೆಯಾಗಿದೆ ಎಂದರ್ಥ. ಈ ರೀತಿ ಅಪರೂಪಕ್ಕೊಮ್ಮೆ ಆಗುತ್ತದೆ. ಒಂದು ವೇಳೆ ಕೆಟ್ಟವಾಸನೆ ಬಂದರೆ ದ್ರಾವಣ ತಯಾರಿಕೆ ನಿಲ್ಲಿಸಿ ಹೊಸ ದ್ರಾವಣ ಬಾಟಲ್ ತೆಗೆದು ಮಿಶ್ರಣ ಮಾಡಬೇಕೆಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಭೇಟಿಯಾಗಬಹುದು.

Leave a Reply

Your email address will not be published. Required fields are marked *