ಮಳೆಯಿಂದ ಹಾನಿಯಾದ ರೈತರ ಖಾತೆಗೆ ಇಂದಿನಿಂದ ಬೆಳೆಹಾನಿ ಪರಿಹಾರ ಹಣ ಜಮೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ಗಡವು ವಿಸ್ತರಣೆ ಮಾಡಿದ್ದರಿಂದ ನಂತರ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ಇಂದಿನಿಂದ ಹಣ ಜಮೆಯಾಗಲಿದೆ.
ಮಳೆಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡವು ಡಿ. 7 ಕ್ಕೆ ಮುಕ್ತಾಯವಾಗಿದೆ. ಅಂದಿನ ಅರ್ಜಿಗಳನ್ನು ಅಂದೇ ಪರಿಶೀಲಿಸಿ ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಹಾರ ಪೋರ್ಟಲ್ ನಲ್ಲಿ ಬೆಳೆ ಹಾನಿ ವಿವರಗಳನ್ನು ಅಪ್ಲೋಡ್ ಮಾಡಿದ್ದರಿಂದ ಡಿಸೆಂಬರ್ 8 ರಿಂದಲೇ ಪರಿಹಾರ ಹಣ ಪಾವತಿಯಾಗಲಿದೆ.
ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್.ಡಿ.ಆರ್.ಎಫ್) ಅಡಿ ಬೆಳೆ ಹಾನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 443 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಲ್ಲಿ 6,6 ಲಕ್ಷ ರೈತರಿಗೆ 132 ಕೋಟಿ ರೂಪಾಯಿಯನ್ನು ಈಗಾಗಲೇ ವಿತರಿಸಲಾಗಿದೆ. ಇತ್ತೀಚೆಗೆ ಮತ್ತೆ ಸರ್ಕಾರವು 311 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರಿಂದ ಹಂತಹಂತವಾಗಿ ರೈತರಿಗೆ ಪರಿಹಾರ ಹಣ ವಿತರಣೆ ಮಾಡಲಿದೆ.
ಡಿಸೆಂಬರ್ 7 ರವರೆಗೆ ಬೆಳೆಹಾನಿ ಮಾಹಿತಿ ಅಪ್ಲೋಡ್ ಮಾಡಲು ಕಾಲಾವಕಾಶ ನೀಡಿದ್ದರಿಂದ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಹಣ ಬಿಡುಗಡೆ ಮಾಡಲು ಕಂದಾಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಶೇ. 33ಕ್ಕಿಂತ ಹೆಚ್ಚು ಪ್ರಮಾಣದ ಬೆಳೆ ಹಾನಿಯಾದರೆ ರೈತರೊಬ್ಬರಿಗೆ ಗರಿಷ್ಠ 2 ಹೆಕ್ಟೇರ್ (5 ಎಕರೆಗೆ) ಬೆಳೆ ಹಾನಿ ನೀಡಲು ಅವಕಾಶ ನೀಡಲಾಗಿದೆ.
ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಬೆಳೆ ಹಾನಿಗೆ 6800 ರೂಪಾಯಿ, ನೀರಾವರಿಗೆ 13500 ಹಾಗೂ ಬಹುವಾರ್ಷಿಕ ತೋಟಗಾರಿಕೆ ಬೆಳೆ ಹಾನಿಯಾದರೆ ಹೆಕ್ಟೇರಿಗೆ 18 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಬೆಳೆ ಪರಿಹಾರದ ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ನೋಡಿ
ರೈತರು ಪರಿಹಾರ ಸ್ಟೇಟಸ್ ನೋಡಲು ಈ https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ವಿಪತ್ತು (calamity Type) ಕಾಲಂನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.ವರ್ಷದಲ್ಲಿ 2021-22 ಆಯ್ಕೆ ಮಾಡಿಕೊಳ್ಳಬೇಕು. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಹಾಗೂ ಎಷ್ಟು ಜಮೆಯಾಗಿದೆ. ಯಾವ ಬ್ಯಾಂಕಿನಲ್ಲಿ ಯಾವ ದಿನಾಂಕದಂದು ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ.
ಕಳೆದ ವರ್ಷದ ಅಂದರೆ 2020-21ನೇ ಸಾಲಿನ ಪರಿಹಾರ ಸ್ಟೇಟಸ್ ಸಹ ನೋಡಿಕೊಳ್ಳಬಹುದು. ವರ್ಷದಲ್ಲಿ 2020-21 ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು /Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಹಣ ನಿಮ್ಮ ಖಾತೆಗೆ ಜಮೆಯಾಗಿದ್ದರೆ ಡಿಟೇಲ್ ಇರುತ್ತದೆ. ತಡವಾಗಿ ಅಂದರೆ ಡಿಸೆಂಬರ್ 7 ರವರೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಈ ವಾರದಲ್ಲಿ ಹಣ ಜಮೆಯಾಗಲಿದೆ.