ಸೋಯಾಬಿನ್ ಅಥವಾ ಇತರೆ ಬೆಳೆಗೆ ಬಸವನ ಹುಳು ಅಥವಾ ಶಂಖು ಹುಳುವಿನ ಕಾಟ (Snail management in crop) ತಪ್ಪಿಸಲು ಕೃಷಿ ತಜ್ಞರು ಕೆಲವು ಸಲಹೆ ನೀಡಿದ್ದಾರೆ. ತಜ್ಞರ ಸಲಹೆಯಂತೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ಬಾಧೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಹಾಗಾದರೆ ಬಸವನ ಹುಳು ನಿಯಂತ್ರಣಕ್ಕೆ ಏನೇನು ಕ್ರಮಕೈಗೊಳ್ಳಬೇಕೆಂಬ ಮಾಹಿತಿ ಇಲ್ಲಿದೆ.
ಬಸವನ ಹುಳುವಿನ ಬಾಧೆ ಯಾವಾಗ ಕಂಡುಬರುತ್ತದೆ?
ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಬೆಳಕು ಇದ್ದರೆ ಹಗಲಲ್ಲೂ ಬಸವನ ಹುಳು ಬಾಧೆ ಕಾಣುತ್ತದೆ. ಸಾಮಾನ್ಯವಾಗಿ ಇವು ಸಂಜೆಯಿಂದ ಬೆಳಗಿನವರೆಗೂ ಬೆಳೆಗಳನ್ನು ತಿಂದು ಮತ್ತೆ ಬೆಳಗ್ಗೆ ತಮ್ಮ ಅಡಗು ತಾಣಗಳನ್ನು ಸೇರಿಕೊಳ್ಳುತ್ತವೆ. ಸೋಯಾ ಗಿಡಗಳು ಬೆಳೆಗಳ ಆರಂಭದ ಹಂತದಲ್ಲಿ ಇರುವಾಗಲೇ ಗಿಡದ ದೇಟುಗಳನ್ನು ಹಾಗೂ ಕಾಂಡಗಳನ್ನು ಕೆರೆದು ತಿನ್ನುತ್ತವೆ. ಕಾಂಡವಲ್ಲದೆ ಎಲೆ, ಕಾಂಡದ ತೊಗಟೆಗಳನ್ನು ಸಹ ತಿನ್ನುತ್ತವೆ. ಈ ಪೀಡೆಯ ಬಾಧೆ ಜಾಸ್ತಿಯಾದಲ್ಲಿ ರೈತರು ವiತ್ತೋಮ್ಮೆ ಬಿತ್ತನೆ ಕಾರ್ಯ ಕೈಗೊಳ್ಳಬೇಕಾಗಬಹುದು.
ಮಳೆಗಾಲದಲ್ಲಿ ನೀರಿನ ಮೂಲದ ಸುತ್ತ ಮುತ್ತ ಹೊಲಗಳಲ್ಲಿ ನಡೆದಾಡಲು ಬಳಸುವ ಕಟ್ಟೆಗಳು, ಒಡಾಡುವ ಸ್ಥಳ, ಕಾಲುದಾರಿ ಬದಿಗಳು, ಕಳೆ-ಕಸಗಳ ಗುಪ್ಪೆ ಈ ಹುಳುಗಳ ಅಡಗು ತಾಣಗಳಾಗಿವೆ. ಬಸವನ ಹುಳುಗಳ ಸಂತಾನ ವೃದ್ಧಿ ಸಹ ಇವೇ ಅಡುಗು ತಾಣಗಳಲ್ಲಾಗುತ್ತದೆ ಒಂದು ಶಂಖದ ಹುಳು ತನ್ನು ಜೀವಿತಾವಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮಾರ್ಥ್ಯ ಹೊಂದಿರುತ್ತದೆ. ಭೂಮಿಯ ಮೇಲ್ಮೆöÊಯಿಂದ 3-5 ಸೆಂ.ಮೀ ಆಳದಲ್ಲಿ ಮೊಟ್ಟೆಗಳನ್ನು ಇರಿಸಿ, ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೊಯಿಂದ ಮರಿಗಳು ಹೊರ ಬಂದು, ದೊಡ್ಡವಾಗುತ್ತಾ ಬೆಳೆಗಳ ಮೇಲೆ ದಾಳಿ ಮಾಡುತ್ತವೆ.
ಬಸವನ ಹುಳುಗಳ ಕಾಟ ಹೇಗೆ ನಿರ್ವಹಣೆ ಮಾಡಬೇಕು?
ಹುಳುಗಳಿಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಕಸಕಡ್ಡಿ ಗುಪ್ಪೆ ಅಥವಾ ಗುಂಪೆ ಮಂತಾದವುಗಳನ್ನು ತಗೆದು ಸ್ವಚ್ಛವಾಗಿಡಬೇಕು. ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪೆ ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂರುತ್ತವೆ. ಈ ಗುಂಪಿಗಳನ್ನು ಸುಡಬೇಕು.
ಸಾಯಂಕಾಲ ಅಥವಾ ಮುಂಜಾನೆ ಸಮಯದಲ್ಲಿ ಕಾಣುವ ಹುಳುಗಳನ್ನು ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆಹಾಕಿ ಅವುಗಳ ಮೇಲೆ ಉಪ್ಪು ಹಾಕಿ ನಾಶಪಡಿಸಬಹುದು. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನಸಿದ ಗೋಣಿ ಚೀಲ ಹರಡಿ ಅಥವಾ ಕೊಳೆತ ಕಸವನ್ನು ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಕಿ.ಗ್ರಾ. ಪ್ರತಿ ಎಕರೆಗೆ) ಧೂಳೀಕರಿಸಿ ನಾಶಪಡಿಸಬಹುದು.
ಮೆಟಾಲ್ಡಿಹೈಡೆಡ್ (2.5ಶೇ) ಮಾತ್ರೆಗಳನ್ನು ಎಕರೆಗೆ 2. ಕಿ.ಗ್ರಾಂ ನಂತೆ ಹೊಲದಲ್ಲಿ ಎರಚಿದಲ್ಲಿ ಹುಳುಗಳು ಅವುಗಳ ಆಕರ್ಷಣೆಗೊಳಗಾಗಿ ಸಾಯುತ್ತವೆ ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್. ಎಂ. ಸಲಹೆ ನೀಡಿದ್ದಾರೆ.