ಸಾವಯವ ಕೃಷಿಯಲ್ಲಿರುವ ಆರು ಆಧಾರ ಸ್ಥಂಭಗಳ ಮಾಹಿತಿ ಇಲ್ಲಿದೆ

Written by By: janajagran

Updated on:

organic farming six fundamentals ಇಂದು ಆಧುನಿಕ ಕೃಷಿ ಪದ್ಧತಿಗೆ ಶರಣಾಗಿ ಸಾಲ ಸೋಲ ಮಾಡಿ ಬೆಳೆ ಬೆಳೆದು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದಾಗ ಹತಾಶರಾಗಿ ಕೃಷಿಯಿಂದ ವಿಮುಖರಾಗುತ್ತಿರುವುದೇ ಹೊಸತೇನಲ್ಲ. ಕೃಷಿಯಿಂದ ಲಾಭವಿಲ್ಲವೆಂದು ಎಷ್ಟು ಜನ ರೈತರು ನಗರಕ್ಕೆ ವಲಸೆ ಹೋಗುತ್ತಿರುವುದು ನೋಡುತ್ತಿದ್ದೇವೆ. ಸಾವಯವ ಕೃಷಿಯನ್ನು ಮರೆತು ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವದರಿಂದ  ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿ ನಿರೀಕ್ಷೆಯಂತೆ ಆಗದೆ ಇರುವದರಿಂದ ಕೆಲವು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಇಂದಿಗೂ ಸಹ ಭೂಮಿಯ ಫಲವತ್ತತೆ ಕಾಪಾಡಲು ಸಾವಯವ ಕೃಷಿಗೆ ಮಹತ್ವಕೊಡಬೇಕೆಂದು ಅಜ್ಜ ತಾತಂದಿರು ಅನುಭವದ ಮಾತುಗಳನ್ನು ಹೇಳುತ್ತಿರುತ್ತಾರೆ. ಕೀಟನಾಶಕಗಳನ್ನು ಬಳಸಿದರೆ ಭೂ ತಾಯಿಗೆ ವಿಷ ಕೊಟ್ಟಂತೆ. ವಿಷ ಉಣಿಸಿ ನಾವು ಸಾವನ್ನು ಹತ್ತಿರ ಮಾಡಿಕೊಳ್ಳುತ್ತಿದ್ದೇವೆಂದು ಸಾವಯವ ಕೃಷಿಕರ (Organic farming) ಅಭಿಪ್ರಾಯವಾಗಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಬೆಳೆ ಕೈಕೊಟ್ಟಿದೆಯೆಂದು ಹತಾಶರಾಗುತ್ತಿರುವ ಇಂದಿನ ಕಾಲದಲ್ಲಿ ಎಲೆಮರೆ ಕಾಯಿಯಂತೆ ಎಷ್ಟೋ ರೈತರು ಸಾವಯವ ಕೃಷಿ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಎಷ್ಟೋ ರೈತರಿಗೆ ಮಾರ್ಗದರ್ಶನ ನೀಡುತ್ತಿರುವುದಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆದರ್ಶವಾಗಿದ್ದಾರೆ. ಸಾವಯವ ಕೃಷಿ ಎಂದು ರೈತರಿಗೆ ಹಾನಿಯನ್ನುಂಟು ಮಾಡುವುದಿಲ್ಲವೆಂದು ಬಹುತೇಕ ರೈತರ ಅಭಿಪ್ರಾಯವಾಗಿದೆ. ಹಾಗಾದರೆ ಸಾವಯವ  ಕೃಷಿ ಎಂದರೇನು ? ಸಾವಯವ ಕೃಷಿಯ ಆಧಾರ ಸ್ಥಂಭಗಳು ಯಾವುವು ಎಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾವಯವ ಕೃಷಿ ಪದ್ಧತಿ ಎಂದರೇನು? (What is organic farming)

ಸಾವಯವ ಕೃಷಿಯಲ್ಲಿ ಮಣ್ಣಿಗೆ ಯಾವುದೇ ರಾಸಾಯನಿಕ ಬೆರಸದೆ ಪ್ರಕೃತಿಯಲ್ಲಿ ಸಿಗುವ ತ್ಯಾಜ್ಯ, ಎರೆಹುಳುಗೊಬ್ಬರ, ಕೊಟ್ಟಿಗೆಗೊಬ್ಬರ, ಹಸಿರೆಲೆಗೊಬ್ಬರ, ಜೀವಾಮೃತ, ನೀಮಾಸ್ತ್ರ ಸೇರಿದಂತೆ ಇನ್ನಿತರ ಸಾವಯವ ಔಷಧಗಳು ಮೂಲಕ ಬೆಳೆಗೆ ತಗಲುವ ರೋಗ, ಕೀಟಗಳ ನೀರ್ವಹಣೆ ಮಾಡುವುದನ್ನು ಸಾವಯವ ಕೃಷಿ ಎನ್ನುವರು.

ಸಾವಯವ ಕೃಷಿಯಲ್ಲಿರುವ ಆರು ಆಧಾರ ಸ್ಥಂಭಗಳು ಯಾವುವು? (organic farming six fundamentals)

ಮಣ್ಣಿನ ನಿರ್ವಹಣೆ. ಮಿಶ್ರಬೆಳೆ, ಹಸಿರೆಲೆ ಗೊಬ್ಬರ, ದೇಸಿ ಜಾನುವಾರುಗಳ ಬಳಕೆ, ನೈಸರ್ಗಿಕ ಸಂಪನ್ಮೂಲ ಬಳಕೆ, ಹಾನಿಕಾರಕ ಜೀವಿಗಳ ನಾಶ ಇವು ಆರು ಸಾವಯವ ಕೃಷಿಯಲ್ಲಿರುವ ಆಧಾರ ಸ್ಥಂಭಗಳು, ಇವುಗಳ ಕುರಿತು ಸಮಗ್ರವಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.

  1. ಸಾವಯವ ಕೃಷಿಯಲ್ಲಿ ಮಣ್ಣಿನ ನಿರ್ವಹಣೆ

ಸಕಲ ಜೀವರಾಶಿಗಳಿಗೆ ಮಣ್ಣೇ ಆಧಾರವೆಂಬುದು ಪ್ರತಿಯೊಬ್ಬರಿಗೂ ಗೊತ್ತಿದ್ದ ಸಂಗತಿ.  ಮಣ್ಣಿಲ್ಲದಿದ್ದರೆ ವ್ಯವಸಾಯವಿಲ್ಲ. ಕೃಷಿ ನಿಂತಿರುವುದೇ ಮಣ್ಣಿನ ಮೇಲೆ. ಸಾವಯವ ಕೃಷಿಯಲ್ಲಿ ಮಣ್ಣಿನಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಮಣ್ಣಿನಲ್ಲಿ ಕೊಟ್ಟಿಗೆಗೊಬ್ಬರ, ಜೈವಿಕಗೊಬ್ಬರ, ಎರೆಹುಳುಗೊಬ್ಬರವನ್ನು ಬಳಸಲಾಗುತ್ತದೆ.

  1. ಮಿಶ್ರ ಬೆಳೆ (multi crops)

ಹಿಂದಿನ ಕಾಲದಲ್ಲಿ ಏಕಬೆಳೆಗಿಂದ ಬಹುಬೆಳೆಗೆ ಮಹತ್ವ ಕೊಡುತ್ತಿದ್ದರು. ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ಮನೆಗೆ ಬೇಕಾಗುವ ಎಲ್ಲಾ ತರಹದ ಬೆಳೆಗಳನ್ನು ಬೆಳೆಸುತ್ತಿದ್ದರು ಎಂಬುದು ನಮಗೆಲ್ಲಾ ಗೊತ್ತು. ಆದರೆ ಇಂದು ಹೆಚ್ಚು ಗಳಿಕೆ ಮಾಡುವುದಕ್ಕಾಗಿ ಏಕಬೆಳೆಗೆ ಮೊರೆಹೋಗುತ್ತಿರುವುದು ದುರದೃಷ್ಟಕರ ಸಂಗತಿ. ಮನೆಗೆ ಅಗತ್ಯವಾಗಿ ಬೇಕಾಗುವ ಬೆಳೆಯನ್ನು ಸಹ ಬೆಳೆಸದೆ ಏಕಬೆಳೆಗೆ ಮಾರುಹೋಗಿದ್ದೇವೆ. ಸಾವಯವ ಕೃಷಿಯಲ್ಲಿ ಮಿಶ್ರಬೆಳೆ ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ.

  1. ನೈಸರ್ಗಿಕ ಸಂಪನ್ಮೂಲ ಬಳಕೆ

ಸಾವಯವ ಕೃಷಿಯಲ್ಲಿ ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡಲಾಗುತ್ತದೆ. ಉಳುಮೆಗೆ ಟ್ರ್ಯಾಕ್ಟರ್ ಗಳನ್ನು ಬಳಸುವುದಿಲ್ಲ. ಉಳುಮೆಗೆ ಎತ್ತುಗಳು, ಮರದ ನೇಗಿಲು ಬಳಸಲಾಗುತ್ತದೆ.  ಕಳೆನಾಶಕ ಸಿಂಪಡಿಸುವುದಿಲ್ಲ. ಬೆಳೆಯ ಮಧ್ಯದಲ್ಲಿರುವ ಕಳೆ ಕೀಳಲು ಕತ್ತಿ, ಕುಡುಗೋಲುನಂತಹ ಉಪಕರಣ ಬಳಸಲಾಗುತ್ತದೆ.  ಕೂರಿಗೆಯಿಂದಲೇ ಬಿತ್ತನೆ ಮಾಡಲಾಗುತ್ತದೆ.

  1. ದೇಸಿ ಜಾನುವಾರುಗಳ ಬಳಕೆ

ಸಾವಯವ ಕೃಷಿಯಲ್ಲಿ ದೇಸಿ ಜಾನುವಾರಗಳ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಲ್ಲದೆ ಸಾವಯವ ಕೃಷಿ ಅಸಾಧ್ಯ. ಜಾನುವಾರುಗಳ ಮೂಲಕ ಸೆಗಣಿ, ಗೋಮುತ್ರ ಸಾವಯವ ಕೃಷಿಗೆ ಮಹತ್ವ. ಬೆಳೆ ಕಟಾವಾದ ನಂತರ ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸುತ್ತಿದ್ದರು.  ಕುರಿ, ಮೇಕೆಗಳ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ.

  1. ಹಸಿರೆಲೆ ಗೊಬ್ಬರ (Green manure)

ರೈತನ ದೊಡ್ಡ ಶತ್ರು ಕಳೆ. ಕಳೆಯ ನಿರ್ವಹಣೆ ಮಾಡುವುದು ರೈತರಿಗೆ ಸವಾಲಿಗೆ ಕೆಲಸವಾಗಿದೆ. ಬಿತ್ತಿದ ಕೂಡಲೇ ಬೀಜ ಮೊಳಕೆಯೊಡೆಯುವದರ ಹಿಂದೆ ಕಾಡುವುದು ಕಳೆ. ಈ ಕಳೆಯಿಂದಲೇ ಗೊಬ್ಬರ ಮಾಡುವುದು ಒಂದು ಕಲೆ. ಸಾವಯವ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಡಯಾಂಚ, ಬೀನ್ಸ್, ಅಲಸಂದಿ ಬೆಳೆಸಿ ಹಸಿರೆಲೆ ಗೊಬ್ಬರವಾಗಿ  ಪರಿವರ್ತಿಸುತ್ತಾರೆ.

  1. ಹಾನಿಕಾರಕ ಕೀಟಗಳು (Pesticide)

ಕೃಷಿಯಲ್ಲಿ ರೈತರಿಗೆ ಎರಡನೇ ದೊಡ್ಡ ಶತ್ರು ಬೆಳೆಗಳಿಗೆ ತಗಲುವ ಕೀಟಗಳು.ಆ ಕೀಟಗಳ ನಿರ್ವಹಣೆಗೆ ರೈತರು ಸಾವಯವ ಕೃಷಿಯಲ್ಲಿ ಗಿಡಗಂಟಿಂಗಳಿಂದ ಕಷಾಯ ಮಾಡಿ ಸಿಂಪರಣೆ ಮಾಡುತ್ತಾರೆ. ಇದು ಸ್ವಲ್ಪ ತಡವಾದರೂ ಕೆಲಸ ಮಾಡುತ್ತದೆ. ಆದರೆ ಇಂದು ರೈತರು ಕ್ಷಣದಲ್ಲಿ ಹುಳುಗಳ ನಾಶ ಮಾಡಲು ರಾಸಾಯನಿಕ ಔಷಧ ಬಳಸುತ್ತಾರೆ. ಇದರಿಂದ ಬೆಳೆಯು ರಾಸಾಯನಿಕವಾಗಿ ಆರೋಗ್ಯ ಹಾಳಾಗುತ್ತದೆ. ಸಾವಯವ ಕೃಷಿಯಲ್ಲಿ ಸಾವಯವ ಔಷಧಗಳಿಂದಲೇ ಬೆಳೆಗಳಿಗೆ ತಗಲುವ ರೋಗ, ಕೀಟ ಬಾಧೆ ನಿಯಂತ್ರಣ ಮಾಡಲಾಗುತ್ತದೆ.

Leave a Comment