ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮಾತ್ರ ಬೆಳೆ ವಿಮೆಯ ಹಣ ಜಮೆಯಾಗುತ್ತದೆ. ಹೌದು, ಅಕಾಲಿಕ ಮಳೆ, ಪ್ರವಾಹ, ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಹಾಳಾದರೆ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.
ಹೌದು, ರೈತರಿಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭವನ್ನು ಇತ್ತೀಚೆಗೆ ಹೆಚ್ಚಿನ ರೈತರು ಪಡೆಯುತ್ತಿದ್ದಾರೆ. ಇನ್ನೂ ನೀವು ಬೆಳೆ ವಿಮೆ ಮಾಡಿಸಿಲ್ಲವೇ? ಬೆಳೆ ವಿಮೆ ಏಕೆ ಮಾಡಿಸಬೇಕು? ಬೆಳೆ ವಿಮೆ ಮಾಡಿಸುವುದರಿಂದ ರೈತರಿಗಾಗುವ ಪ್ರಯೋಜನದ ಮಾಹಿತಿ ಇಲ್ಲಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಎಂದರೇನು?
2016 ರಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರಿಗೆ ದೇಶಾದ್ಯಂತ ಕಡಿಮೆ ಏಕರೂಪದ ಪ್ರಿಮಿಯಂನಲ್ಲಿ ನಷ್ಟ ಪರಿಹಾರ ಒದಗಿಸುವ ಯೋಜನೆ ಇದಾಗಿದೆ. ಬಿತ್ತನೆಯಿಂದ ಹಿಡಿದು ರಾಶಿಯಾಗುವವರೆಗೂ ವಿಮಾ ವ್ಯಾಪ್ತಿಯಿರುತ್ತದೆ.
ರೈತರಿಗೆ ಬೆಳೆ ವಿಮೆ ಹಣ ಯಾವಾಗ ಬರುತ್ತದೆ?
ಸ್ಥಳೀಯ ವಿಪತ್ತುಗಳಿಂದ ಉಂಡಾಗುವ ವೈಯಕ್ತಿಕ ಜಮೀನು ನಷ್ಟಗಳು, ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹ, ಅಕಾಲಿಕ ಮಳೆ, ನೈಸರ್ಗಿಕ ಬೆಂಕಿಯಂತಹ ಅಪಾಯಗಳಿಂದ ಬೆಳೆ ಹಾಳಾದರೆ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.
ಯಾವ ಬೆಳೆಗೆ ಎಷ್ಟುವಿಮೆ ಹಣ ಪಾವತಿಸಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಪಾವತಿಸಬೇಕೆಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಚೆಕ್ ಮಾಡಬಹುದು. ಹೌದು, ರೈತರು ಈ
https://www.samrakshane.karnataka.gov.in/Premium/Premium_Chart.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಬೆಳೆ ಆಯ್ಕೆ ಮಾಡಿಕೊಂಡು ಎಷ್ಟು ಎಕರೆಗೆ ಬೆಳೆ ವಿಮೆ ಪಾವತಿಸುವಿರೋ ಅದನ್ನು ನಮೂದಿಸಿ ಶೋ ಪ್ರಿಮಿಯಂ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಬೆಳೆ, ಎಷ್ಟು ಎಕರೆ ನಮೂದಿಸಿದ್ದೀರೋ ಅಲ್ಲಿ ಫಾರ್ಮರ್ ಶೇರ್ ನಲ್ಲಿ ನೀವು ಪಾವತಿಸುವ ಮೊತ್ತ ಕಾಣುತ್ತದೆ. ಹೆಕ್ಟೇರ್ ಹಾಗೂ ನೀವು ನಮೂದಿಸಿದ ಎಕರೆಗೆ ಬೆಳೆ ಹಾನಿಯಾದರೆ ಎಷ್ಟು ವಿಮೆ ಹಣ ಜಮೆ.ಯಾಗುತ್ತದೆ ಎಂಬುದನ್ನು ನೋಡಬಹುದು.
ಬೆಳೆ ವಿಮೆ ಪಾವತಿಸಲು ಈ ದಾಖಲೆ ಇರಬೇಕು?
ರೈತರು ಬೆಳೆ ವಿಮೆ ಮಾಡಿಸಲು ತಮ್ಮ ಬಳಿ ಜಮೀನಿನ ಪಹಣಿ ಇರಬೇಕು.ಬ್ಯಾಂಕ್ ಪಾಸು ಬುಕ್ ಝರಾಕ್ಸ್ ಪ್ರತಿ ಇರಬೇಕು. ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ಬೆಳೆ ವಿಮೆ ಪಾವತಿಸಲು ಕೊನೆಯ ದಿನಾಂಕ?
ಮುಂಗಾರು ಹಂಗಾಮಿನ ಕೆಲವು ಬೆಳೆಗಳ ವಿಮೆ ಮಾಡಿಸಲು ಇದೇ ತಿಂಗಳು ಜುಲೈ 31 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಬೆಳೆ ವಿಮೆ ಮಾಡಿಸಿ ನಿರಾಳರಾಗಬಹುದು. ಈಗಾಗಲೇ ಬೆಳ ವಿಮಾ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಬೆಳೆ ವಿಮೆ ಮಾಡಿಸುವುದಕ್ಕಾಗಿ ರೈತರು ಯಾರನ್ನು ಸಂಪರ್ಕಿಸಬೇಕು?
ರೈತರು ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚೆ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು. ಬೆಳೆ ವಿಮೆ ಮಾಡಿಸುವುದರಿಂದಾಗುವ ಪ್ರಯೋಜನ? ಬೆಳೆ ವಿಮೆ ಏಕೆ ಮಾಡಿಸಬೇಕೆಂಬುದರ ಕುರಿತು ವಿಚಾರಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು. ತಾಲೂಕಿನ ತೋಟಗಾರಿಕೆ ಇಲಾಖೆ, ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೂ ಸಂಪರ್ಕಿಸಬಹುದು. ಯಾವ ಬ್ಯಾಂಕಿನಲ್ಲಿ ಖಾತೆಯಿದೆಯೋ ಅಲ್ಲಿಯೂ ಬೆಳೆ ವಿಮೆ ಹಣ ಪಾವತಿಸಬಹುದು.
ಬೆಳೆ ವಿಮಾ ಕಂಪನಿಯ ಸಹಾಯವಾಣಿ
ಕಳೆದ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ವಿಮೆ ಹಣ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ರೈತರು ಬೆಳೆ ವಿಮೆ ಉಚಿತ ಸಹಾಯವಾಣಿಗೆ ಕರೆ ಮಾಡಬಹುದು. ರೈತರು 1800 180 1551 ಗೆ ಕರೆ ಮಾಡಿ ಬೆಳೆ ವಿಮೆ ಮಾಹಿತಿ ಪಡೆಯಬಹುದು.