ಬಿರು ಬೇಸಿಗೆ ಕಳೆದು ಮುಂಗಾರು ಮನೆ ಬಾಗಿಲಿಗೆ ಬರುವ ಹಬ್ಬವೇ (kara hunnime) ಕಾರಹುಣ್ಣಿಮೆ. ಇದು ಮುಂಗಾರಪು ಆರಂಭದ ಮೊದಲ ( kaara hunnime the first festival of farmers) ಹಬ್ಬವಾಗಿದೆ.   ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಯಾದಗಿರಿ, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ವೈಭವದಿಂದ ಆಚರಿಸಲಾಗುವ ಹಬ್ಬಗಳಲ್ಲಿ ಕಾರಹುಣ್ಣೆಮೆಯೂ ಒಂದಾಗಿದೆ.

ಗುರುವಾರ ಮುಂಗಾರು ಹಂಗಾಮಿನ ಸಿದ್ದತೆಯ ನಡುವೆ ರೈತರು ತಮ್ಮ ಎತ್ತುಗಳನ್ನು ಅಲಂಕಾರ ಮಾಡಿ ಗ್ರಾಮದಲ್ಲಿ ಓಡಾಡಿಸುವ ಮೂಲಕ ಸಂಭ್ರಮದಿಂದ ಕಾರಣ ಹುಣ್ಣಿಮೆ ಆಚರಿಸಿದರು.

ಬೇಸಿಗೆ ಕಾಲದ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಜೂನ್ ತಿಂಗಳಲ್ಲಿ ಬರುವ ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಮಾಡುವ ಅಲಂಕಾರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ.  ದೇಶಕ್ಕೆ ರೈತ ಬೆನ್ನೆಲಬು ಆದರೆ ರೈತರಿಗೆ ಎತ್ತುಗಳೇ ಬೆನ್ನೆಲಬು. ರೈತರ ಮೊದಲ ಹಬ್ಬವೆಂದೇ ಕರೆಯಲ್ಪಡುವ ಕಾರಹುಣ್ಣಿಮೆಯಂದು ಎತ್ತುಗಳಿಗೆ ಅರಿಶಿಣ ಕುಂಕುಮ ಹಚ್ಚಿ, ಕೋಡುಗಳಿಗೆ ಬಣ್ಣ ಬಣ್ಣಗಳಿಂದ ಸಿಂಗರಿಸಿ, ಕುತ್ತಿಗೆಗೆ ಅಲಂಕಾರಿಕ ಹಗ್ಗ, ಗೊಂಡೆ ಕಟ್ಟಿ ಸಿಂಗರಿಸಿ ಮೆರವಣಿಗೆ ಮಾಡಿ ರೈತರು ಸಂಭ್ರಮಿಸುತ್ತಾರೆ.

ಕಾರ ಹುಣ್ಣಿಮೆಯ ವಿಶೇಷತೆ

ಬೇಸಿಗೆ ಕಾಲದಲ್ಲಿ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ಬಣ್ಣ ಬಣ್ಣಗಳಿಂದ ಶೃಂಗರಿಸಿ ತಮ್ಮ ಕೃತಜ್ಞತೆ ಸಮರ್ಪಿಸುತ್ತಾರೆ. ಅವುಗಳಿಗೆ ಪೂಜೆ ಮಾಡಿ ಎತ್ತುಗಳ ಸೇವೆಯನ್ನು ಸ್ಮರಿಸುತ್ತಾರೆ.

ಎತ್ತುಗಳಿಗೆ ಏನೇನು ಮಾಡುತ್ತಾರೆ ಗೊತ್ತಾ

ಕಾರ ಹುಣ್ಣಿಮೆಯಂದು ಗ್ರಾಮದ ಹತ್ತಿರವಿರುವ ಹಳ್ಳ, ಅಥವಾ ನದಿ ದಂಡೆಯಲ್ಲಿ ಮೈ ತೊಳೆದು ಕೆಂಪು, ಹಳದಿ, ಗುಲಾಬಿಯಂತಹ ಬಣ್ಣ ಹಚ್ಚುತ್ತಾರೆ. ಕೊರಳಿಗೆ ಗೆಜ್ಜೆಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ. ಕೊಂಬಿಗೆ ಬಣ್ಣ ಹಚ್ಚುತ್ತಾರೆ. ನಂತರ ಹತ್ತಿರದ ದೇವಸ್ಥಾನದ ಬಳಿ ಕರಿ ಹರಿದು ಸ್ಮರಿಸುತ್ತಾರೆ. ಕೆಲವು ಕಡೆ ಓಟಗಳ ಸ್ಪರ್ಧೆ, ಇನ್ನೂ ಕೆಲವು ಕಡೆ ಕರಿ ಹರಿಯುವ ಸ್ಪರ್ಧೆ ಏರ್ಪಡಿಸುತ್ತಾರೆ.  ಸೇಡಂ ತಾಲೂಕಿನಲ್ಲಿ ಹಣೆಗೆ ಬಾಸಿಂಗ್ ಕಟ್ಟಿ ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮನೆಯ ಮುಂದೆ ತಂದು ಪೂಜೆ ಪುನಸ್ಕಾರ ಮಾಡಿ ಹೋಳಿಗೆ ತಿಳಿಸುತ್ತಾರೆ. ಸಂಬಂಧಿಕರಿಗೆ, ಎತ್ತುಗಳ ಮೆರವಣಿಗೆಯ ಹಿಂದೆ ಬರುವವರಿಗೆ ಹೋಳಿಗೆ ಊಟ ಮಾಡಿಸುತ್ತಾರೆ.

Leave a Reply

Your email address will not be published. Required fields are marked *