ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸಾಮಾನ್ಯ ರೈತರಿಗೆ ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣಗಳು, ನಾಟಿ, ಬಿತ್ತನೆ ಉಪಕರಣಗಳು ಕುಯ್ಲು, ಮತ್ತು ಒಕ್ಕಣೆ ಉಪಕರಣಗಳನ್ನು ನೀಡಲಾಗುವುದು. ಡಿಸೆಲ್ ಪಂಪ್ ಸೆಟ್, ಅಂತರ ಬೇಸಾಯ ಉಪಕರಣಗಳು ಹಾಗೂ ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹಾಯಧನದಲ್ಲಿ ನೀಡಲಾಗುವುದು.
2 ಲಕ್ಷ ರೂಪಾಯಿಯವರೆಗೆ ಕೃಷಿ ಯಂತ್ರೋಪಕರಣಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಸಹಾಯಧನ ಗರಿಷ್ಠ ಮಿತಿ 1 ಲಕ್ಷ ರೂಪಾಯಿಯವರೆಗೆ ಹಾಗೂ ಸಣ್ಣ ಟ್ರ್ಯಾಕ್ಟರ್ ಗಳಿಗೆ 75 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಸಣ್ಣ ಟ್ರ್ಯಾಕ್ಟರ್ ಗಳಿಗೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ಹಾಗೂ ಉಳಿದ ಕೃಷಿ ಉಪಕರಣಗಳಿಗೆ ಶೇ. 90 ರಷ್ಟು ಸಹಾಯಧನವನ್ನು ನೀಡಲಾಗುವುದು.
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸವಣೂರ ಹಾಗೂ ಹತ್ತಿಮತ್ತೂರ ಹೋಬಳಿಗಳ ವ್ಯಾಪ್ತಿಯಲ್ಲಿರುವ ರೈತರಿಗೆ ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣ ನೀಡಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ. ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೊಬೈಲ್ ನಲ್ಲೇ ಜಮೀನಿನ ಅಳತೆ ಮಾಡುವುದು ಹೇಗೆ? ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ
ಈ ಯೋಜನೆಯಡಿಯಲ್ಲಿ ಕೃಷಿ ಯಂತ್ರೋಪಕರಣ ಪಡೆಯಲಿಚ್ಚಿಸುವ ರೈತರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಹಾವೇರಿ ಜಿಲ್ಲೆಯ ಸವಣೂರ ಹಾಗೂ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ರೈತರಾಗಿರಬೇಕು. ಮಾರ್ಚ್ 16 ರೊಳಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಕೃಷಿ ಯಾಂತ್ರೀಕರಣ ಯೋಜನೆ?
ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಿ ರೈತರ ಆದಾಯ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕೃಷಿ ಯಂತ್ರೋಪಕರಣಗಳು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುತ್ತದೆ. ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕೃಷಿಇಲಾಖೆಯಲ್ಲಿ ಭೂಮಿ ಸಿದ್ದತೆಯಿಂದ ಹಿಡಿದು ಕೊಯ್ಲಿನವರೆಗೂ ಕೃಷಿ ಯಂತ್ರೋಪಕರಣಗಳನ್ನುಸಹಾಯಧನದಲ್ಲಿ ರೈತರಿಗೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.
ರೈತರಿಗೆ ಹೇಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುವುದು?
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ರೈತರಿಗೆ ಹಿರಿತನದ ಆಧಾರದ ಮೇಲೆ ಅಂದರೆ ಅರ್ಜಿ ಸಲ್ಲಿಸಿದ ಮೊದಲ ರೈತರಿಗೆ ಆದ್ಯತೆ ನೀಡಲಾಗುವುದು. ಹಿಂದೆ ಈಯೋಜನೆಯಡಿಯಲ್ಲಿ ಸೌಲಭ್ಯ ಪಡೆಯದಿರಬಾರದು. ಅಂತಹ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಯಾವ ಯಾವ ಕೃಷಿ ಯಂತ್ರೋಪಕರಣಗಳಿವೆಯೋ ಅವುಗಳನ್ನು ರೈತರಿಗೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಲಿಚ್ಚಿಸುವ ರೈತರು ಆಧಾರಕಾರ್ಡ್ ಹೊಂದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. ಜಮೀನಿನ ಪಹಣಿ ಹೊಂದಿರಬೇಕು. ರೈತರಿಗೆ ಎಫ್ಐಡಿ ಸಂಖ್ಯೆ ಹೊಂದಿರಬೇಕು. (ಕೆ ಕಿಸಾನ್ ನಲ್ಲಿ ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿ ಎಫ್ಐಡಿ ಸಂಖ್ಯೆ ಪಡೆಯಬಹುದು)
ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.