ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ಅನುಕೂಲಕ್ಕಾಗಿ ಮಣ್ಣು ಮತ್ತು ನೀರು ಪರೀಕ್ಷೆಗಾಗಿ ಪ್ರಯೋಗಾಲಯವಿದ್ದು, ರೈತರು ಮಣ್ಣು ಪರೀಕ್ಷೆ ಮಾಡಿಕೊಂಡು ಇದರ ಪ್ರಯೋಜನ ಪಡೆಯಬೇಕೆಂದು ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ (ಮಣ್ಣು ವಿಜ್ಞಾನ) ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ. ಹಾಗೂ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥಡಾ. ರಾಜು ಜಿ. ತೆಗ್ಗೆಳ್ಳಿ ಸಲಹೆ ನೀಡಿದ್ದಾರೆ.
ಮಣ್ಣಿನ ಫಲವತ್ತತೆ ಮತ್ತು ಗುಣಧರ್ಮಗಳನ್ನು ತಿಳಿಯಲು ಮಣ್ಣಿನ ಪರೀಕ್ಷೆಗೆ ಏಪ್ರೀಲ್ ಹಾಗೂ ಮೇ ತಿಂಗಳು ಸಕಾಲವಾಗಿದೆ. ಜಿಲ್ಲೆಯ ಮಣ್ಣಿನಲ್ಲಿ ಹಲವು ಪೋಷಕಾಂಶಗಳ ಕೊರತೆ ಕಂಡು ಬಂದಿದ್ದು, ಇದರಿಂದ ಬೆಳೆಗಳ ಇಳುವರಿಯು ಕುಂಠಿತವಾಗುತ್ತಿದೆ. ಹೀಗಾಗಿ ವೈಜ್ಞಾನಿಕವಾಗಿ ಪೋಷಕಾಂಶಗಳ ಸಮಗ್ರ ನಿರ್ವಹಣೆ ಹಾಗೂ ಸೂಕ್ತ ನೀರಾವರಿ ಪದ್ಧತಿಗಳ ಅಳವಡಿಕೆಗಾಗಿ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸುವುದು ಅತ್ಯಗತ್ಯವಾಗಿದೆ.
ಕಳೆದ ವರ್ಷ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು ಎಂಟುನೂರು ಮಣ್ಣು ಮತ್ತು ಎರಡು ನೂರಕ್ಕಿಂತಲೂ ಹೆಚ್ಚಿಗೆ ನೀರಿನ ಮಾದರಿಗಳ ಪರೀಕ್ಷೆ ಮಾಡಿ, ಫಲಿತಾಂಶದ ಆಧಾರದ ಮೇಲೆ ಹೆಚ್ಚಿನ ಇಳುವರಿಗಾಗಿ ಕೈಗೊಳ್ಳಬೇಕಾದ ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಮಣ್ಣು ಆರೋಗ್ಯ ಚೀಟಿ ನೀಡುವ ಮೂಲಕ ಫಲಿತಾಂಶ ನೀಡಲಾಗಿದೆ.
ಇದನ್ನೂ ಓದಿ : ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ
ಆದ್ದರಿಂದ ರೈತ ಬಾಂಧವರು ತಮ್ಮ ಕ್ಷೈತ್ರಗಳಲ್ಲಿ ವೈಜ್ಞಾನಿಕವಾಗಿ ಮಣ್ಣು ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪೋಷಕಾಂಶಗಳ ಕೊರತೆಯನ್ನು ನೀಗಿಸಿ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ಏನಿದು ಮಣ್ಣು ಪರೀಕ್ಷೆ?
ಮನುಷ್ಯನ ಆರೋಗ್ಯ ಪರೀಕ್ಷೆ ಮಾಡಿಸುವಂತೆ ಮಣ್ಣಿನ ಆರೋಗ್ಯವನ್ನು ತಪಾಸಣೆ ಮಾಡಿಸಬೇಕು. ಮಣ್ಣು ಪರೀಕ್ಷೆ ಎಂದರೆ ಮಣ್ಣಿನ ಮಾದರಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಆ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದನ್ನು ಮಣ್ಣು ಪರೀಕ್ಷೆ ಎನ್ನುವರು.
ಮಣ್ಣಿನ ವೈಜ್ಞಾನಿಕ ಪರೀಕ್ಷೆಯಿಂದ ಮಣ್ಣಿನ ಆರೋಗ್ಯ ಹೇಗಿದೆ ಎಂದು ತಿಳಿಯುವುದರಿಂದ ನಿಖರವಾಗಿ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ನೀರು ಹಿಡಿದುಟ್ಟುಕೊಳ್ಳುವ ಮತ್ತು ಗಾಳಿಯಾಡುವ ಸಾಮರ್ಥ್ಯವೇನು ಎಂಬುದುನ್ನು ತಿಳಿದುಕೊಳ್ಳಬಹುದು.
ಹೊಲದ ಯಾವ ಸ್ಥಳದಿಂದ ಮಣ್ಣು ಸಂಗ್ರಹಿಸಬಾರದು?
ಹೊಲದ ಬದು ಬಳಿ, ಮರದ ಕೆಳಗೆ, ರಸ್ತೆ ಬಳಿ, ನೀರಾವರಿ ಕಾಲುವೆ, ಕೊಳವೆ ಬಾವಿ, ತೆರೆದ ಬಾವಿ ಬಳಿ ಹಾಗೂ ನೀರಿನ ಮೂಲವಿರುವ ಸ್ಥಳದಿಂದ ಮಣ್ಣು ಸಂಗ್ರಹಿಸಬಾರದು. ವಿದ್ಯುತ್ ಕಂಬ ಇರುವ ಕಡೆ ಮಾದರಿ ತೆಗೆಯಬಾರದು. ಹೊಲದಲ್ಲಿ ಸಾವಯವ ಗೊಬ್ಬರ ರಾಶಿ ಹಾಕಿದ ಸ್ಥಳದಿಂದಲೂ ಮಣ್ಣು ಮಾದರಿ ತೆಗೆಯಬಾರದು.
ಮಣ್ಣು ಪರೀಕ್ಷೆಗೆ ಹೊಲದ ಯಾವ ಸ್ಥಳದಿಂದ ಮಾದರಿ ಸಂಗ್ರಹಿಸಬೇಕು?
ಮಣ್ಣು ಮಾದರಿ ತೆಗೆಯಲು ಗುದ್ದಲಿ, ಹಾರ, ಪಿಕಾಸಿ ಬಳಸಬಹುದು. ಒಂದು ಎಕರೆ ಜಮೀನಿನಲ್ಲಿ ನಾಲ್ಕರಿಂದ ಐದು ಕಡೆ ಗುರುತು ಮಾಡಿ ಮಣ್ಣು ಸಂಗ್ರಹಿಸಬೇಕು. ಮಣ್ಣು ಮಾದರಿ ಸಂಗ್ರಹಿಸುವ ಮೊದಲು ಮಣ್ಣು ಸಂಗ್ರಹಿಸುವ ಭೂಮಿಯ ಮೇಲ್ಭಾಗದಲ್ಲಿರುವ ಕಲ್ಲು, ಕಸಕಡ್ಡಿ, ಹುಲ್ಲು ಇತ್ಯಾದಿ ತೆಗೆದು ಸ್ವಚ್ಛಗೊಳಿಸುಬೇಕು. ಗುರುತು ಮಾಡಿದ ಸ್ಥಳದಲ್ಲಿ 15-20 ಸೆಂಟಿ ಮೀಟರ್ ಆಳದಲ್ಲಿ ಗುಂಡಿ ತೆಗೆಯಬೇಕು. ಎಷ್ಟು ಆಳ ಗುಂಡಿ ತೆರೆದಿರುತ್ತೇವೆಯೋ ಅಷ್ಟೇ ಆಳ ಮತ್ತು ಅಷ್ಟೇ ಅಗಲದಲ್ಲಿ ಒಂದು ಸೆಂ.ಮೀ ದಪ್ಪ ಮಣ್ಣನ್ನು ಕೆರೆಯಬೇಕು. ಕೆರೆದ ಮಣ್ಣನ್ನು ತುಂಬಿಕೊಳ್ಳಬೇಕು.
ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ
ಇದೇ ರೀತಿ ನಾಲ್ಕೈದು ಸ್ಥಳದಲ್ಲಿ ಸಂಗ್ರಹಿಸಿದ ಮಣ್ಣನ್ನು ಪ್ಲಾ,ಸ್ಟಿಕ್ ಚೀಲದ ಮೇಲೆ ಹರಡಿ ಬೆರೆಸಬೇಕು. ಅದಲ್ಲಿರುವ ಕಸಕಡ್ಡಿಗಳನ್ನು ತೆಗದು ನಾಲ್ಕು ನಾಲ್ಕು ಭಾಗ ಮಾಡಿ ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗವುನ್ನು ತೆಗದು ಉಳಿದ ಭಾಗದ ಮಣ್ಣನ್ನು ಮಿಕ್ಸ್ ಮಾಡಬೇಕು. ಹೀಗೆ ಸಂಗ್ರಹಿಸಿದ ಮಣ್ಣು250 ರಿಂದ 300 ಗ್ರಾಂ ಇರಬೇಕು. ಇದನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಣ್ಣು ಪರೀಕ್ಷೆಗೆ ಕಳುಹಿಸಬೇಕು. ಮಣ್ಣು ಪರೀಕ್ಷೆಗೆ ರೈತರು ಸರ್ವೆ ನಂಬರ್, ಗ್ರಾಮ, ಹೋಬಳಿ, ಬಳಸಿದ ಗೊಬ್ಬರ, ಯಾವ ಬೆಳೆಯಲಾಗಿತ್ತು ಎಂಬುದನ್ನ ನಮೂದಿಸಬೇಕು.
ಮಣ್ಣು ಪರೀಕ್ಷೆ ಏಕೆ ಮಾಡಬೇಕು?
ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕೆಂದರೆ ಬೆಳೆಗಳಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳ (ಸಾರಜನಕ, ರಂಜಕ, ಪೋಟ್ಯಾಷ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಗಂಧಕ ಹಾಗೂ ಸತು, ಬೋರಾನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್) ಲಭ್ಯತೆಯ ಪ್ರಮಾಣ ಹಾಗೂ ಕೊರತೆ ಸೇರಿದಂತೆ ಇನ್ನಿತರ ಮಾಹಿತಿ ತಿಳಿಯಲು ಮಣ್ಣು ಪರೀಕ್ಷೆ ಮಾಡಿಸಬೇಕು.
ಮಣ್ಣು ಪರೀಕ್ಷೆಗೆ ಮಣ್ಣು ಸಂಗ್ರಹಿಸುವ ಮೊದಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿ ಕೃಷಿ ತಜ್ಞರು ಇರುತ್ತಾರೆ. ನಿಮಗೆ ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ.ಅವರು ಹೇಳಿದ ಹಾಗೆ ಮಣ್ಣು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು.