ಜಾನುವಾರು ಸಾಕಾಣಿಕೆದಾರರಿಗೆ ಕಾಲಕಾಲಕ್ಕೆ ಮಹತ್ವಹ ಮಾಹಿತಿಗಳನ್ನು ನೀಡಲು ಹಾಗೂ ಜಾನುವಾರು ಸಾಕಣೆದಾರರಿಗೆ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಮತ್ತಷ್ಟು ಹತ್ತಿರವಾಗಲು ನೆರವಾಗುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್) ಆರಂಭಿಸಲಾಗಿದೆ.
ಹೆಬ್ಬಾಳದ ಪಶುಭವನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಂ) ರೈತರಿಗಾಗಿ ಆರಂಭಿಸಲಾಗಿದೆ ಎಂದರು.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ದಿನ 24 ಗಂಟೆಯೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. 8277100200 ಸಹಾಯವಾಣಿಗೆ ರೈತರು ಕರೆ ಮಾಡಿ ಪಶುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು., ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ವಾರ್ ರೂಂ ಮಹತ್ವದ ಕಾರ್ಯವಹಿಸಲಿದೆ. ಇದರ ಪ್ರಯೋಜನವನ್ನು ಎಲ್ಲಾ ಜಾನುವಾರು ಸಾಕಾಣಿಕೆದಾರರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶುಸಂಗೋಪನೆ ಇಲಾಖೆ ರೈತರಿಗೆ ಈ ವಾರ್ ರೂಂ ಮೂಲಕ ಮಾರ್ಗದರ್ಶನ ಮಾಡಲಿದೆ. ರೈತರ ಕಲ್ಯಾಣಕ್ಕಾಗಿ ಪಶಸಂಗೋಪನೆ ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದೆ. ಹೈನೋದ್ಚಮಕ್ಕೆ ಪ್ರಾಣಿ ಕಲ್ಯಾಣ ಸಹಾಯವಾಣಿಯಿಂದ ಸಹಕಾರಿಯಾಗಲಿದ್ದು, ವಾರ್ ರೂಂ ಮೂಲಕ ರೈತರು ಮತ್ತು ಜಾನುವಾರು ಸಾಕಣೆದಾರರು ಅಗತ್ಯ ಮಾಹಿತಿ ಪಡೆಯಬಹುದು ಎಂದರು.
ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮವಾಗಿ ಚುಚ್ಚುಮದ್ದು ಹಾಕಿಸಬೇಕಾದ ವಿವರ, ಬ್ಯಾಂಕುಗಳಿಂದ ವಿವಿಧ ಸಾಲ ಸೌಲಭ್ಯಗಳ ಮಾಹಿತಿ, ಮಿಶ್ರತಳಿ, ಹೈನುರಾಸುಗಳ, ಕುರಿ ಹಂದಿಗಳು, ದೊರೆಯುವ ಸ್ಥಳಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.
ಹೆಬ್ಬಾಳದ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್. ಶಿವರಾಮ ಮಾತನಾಡಿ, ಸಹಾಯವಾಣಿಯಲ್ಲಿ ಒಟ್ಟು 24 ಜನ ಕಾರ್ಯನಿರ್ವಹಿಸಲಿದ್ದು, ಮೂಬರು ತಂಡಗಳಾಗಿ 24*7 ರಂತೆ ಕಾರ್ಯನಿರ್ವಹಿಸಲಿದೆ. ರೈತರು ವ್ಯಾಟ್ಸಪ್ ಮೂಲಕ ಮಾಹಿತಿ ನೀಡಬಹುದು. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಪಶುವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗಳು ತೆರಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಕೇವಲ ಹಸುಗಳಿಗಷ್ಟೇ ಅಲ್ಲ, ಆಡು, ಕುರಿ, ಮೊಲ, ಕೊಳಿ, ಹಂದಿ ಸೇರಿದಂತೆ ಇನ್ನಿತರ ಪ್ರಾಣಿ ಪಕ್ಷಿಗಳ ರಕ್ಷಣೆಗೆ ನೆರವು ನೀಡಲಾಗುವುದು. ಪಕ್ಷಿಗಳು, ಹಾವು, ಹಾಗೂ ಕಾಡು ಪ್ರಾಣಿಗಳು, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಬಯಸುವ ನಾಗರಿಕರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ಪ್ರಾಣಿ ಕಲ್ಯಾಣ ಸಹಾಯವಾಣಿ ನಂ. 8277100200 (ವಾರ್ ರೂಮ್)
ರಾಜ್ಯದ ಎಲ್ಲಾ ಪ್ರಾಣಿಗಳ ಕಲ್ಯಾಣ ಅನುಷ್ಠಾನಕ್ಕಾಗಿ ಸುಸಜ್ಜಿತ ರಾಜ್ಯ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್ ) ಇದಾಗಲಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಕ್ರಮವಹಿಸಲಾಗುತ್ತದೆ. ಸ್ವಂತ ಉದ್ಯೋಗ, ಲಸಿಕೆ ಸೇರಿ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ
ಪಶುಪಾಲಕರ ಸಹಾಯವಾಣಿ 1800 425 0012
ಪಶುಪಾಲನಾ ಇಲಾಖೆಯು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ‘ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ’ ಕಾರ್ಯಕ್ರಮದ ಅಡಿಯಲ್ಲಿ ಪಶುಪಾಲಕರ ‘ಸಹಾಯವಾಣಿ’ ಯನ್ನು ಆರಂಭಿಸಲಾಗಿದೆ.
ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ 1800 425 0012 (ಉಚಿತ) ಅಥವಾ 080-23417100 ಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ, ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.
ಸಹಾಯವಾಣಿಯ ಮೂಲಕ ಲಭ್ಯವಿರುವ ಮಾಹಿತಿಗಳು:
ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಲಭ್ಯವಿರಲಿದೆ.
ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರ ಸಿಗಲಿದೆ. ದೇಶಿ ಹಾಗೂ ವಿದೇಶಿ ಜಾನವಾರು ತಳಿಗಳ ಬಗ್ಗೆ ಮಾಹಿತಿ ಸಿಗಲಿದೆ. ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ ಸಿಗಲಿದೆ.
ಮಿಶ್ರತಳಿ ಹಸು, ಕುರಿ ಮತ್ತು ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ ಸಹ ತಿಳಿಯಲಿದೆ. ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ ಸಿಗಲಿದೆ.