ರಾಜ್ಯದ ರೈತರ ಜಾನುವಾರುಗಳಿಗೆ ಮನೆ ಬಾಗಿಲಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೇಂದ್ರ ಸರ್ಕಾರದ ಅನುದಾನದಿಂದ ಆರಂಭಿಸಲಾಗಿರುವ ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ.

ದೇಶಾದ್ಯಂತ 4000 ಸಂಚಾರಿ ಪಶು ಚಿಕಿತ್ಸಾವಾಹನ ಸೇವೆ ಆರಂಭಿಸಲು ಉದ್ದೇಶಿಸಿದ್ದು, ಕರ್ನಾಟಕಕ್ಕೆ 275 ಘಟಕ ಮಂಜೂರು ಮಾಡಲಾಗಿದೆ.  ಈ ಪೈಕಿ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ70  ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ.

ಶನಿವಾರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ಈ ಸಂಚಾರಿ ವಾಹನಗಳನ್ನು ಲೋಕಾರ್ಪಣೆಗೊಳಿಸಿದರು.

ಯಾವ ಪಶುಗಳಿಗೆ ಚಿಕಿತ್ಸೆ ನೀಡಲಾಗುವುದು?

ಕುರಿ, ಮೇಕೆ, ಆಕಳು, ಎಮ್ಮೆ, ಎತ್ತು, ಕೋಣ, ಹಂದಿಗಳು ಅನಾರೋಗ್ಯ ಸೇರಿ ಬೇರೆ ರೀತಿಯ ಸಮಸ್ಯೆಗೆ ಸಿಲುಕಿದಾಗ ರೈತರು ಕರೆ ಮಾಡಿದರೆ ಸಾಕು, ಮನೆಬಾಗಿಲೆಗೆ ಆ್ಯಂಬುಲೆನ್ಸ್ ಬಂದು ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.  ರೈತರು ಆ್ಯಂಬುಲೆನ್ಸ್ ಗೆ ಕರೆ ಮಾಡಿದಾಗ ಸಂಬಂಧಪಟ್ಟ ವೈದ್ಯರಿಗೆ ತಿಳಿಸಿ ಚಿಕಿತ್ಸೆಗೆ ಕಳುಹಿಸಲಾಗುವುದು.

ರೈತರು ಯಾವ ನಂಬರಿಗೆ ಕರೆ ಮಾಡಬೇಕು?

ಪಶುಗಳು ಅನಾರೋಗ್ಯಕ್ಕೆ ಒಳಪಟ್ಟಾಗ ಅಥವಾ ಇನ್ನಾವುದೋ ಸಮಸ್ಯೆಯಿದ್ದಾಗ ರೈತರು  1962 ನಂಬರಿಗೆ ಕರೆ ಮಾಡಬೇಕು. ಆಗ ಸಂಬಂಧಪಟ್ಟ ಅಧಿಕಾರಿಗಳು ಕರೆ ಸ್ವೀಕರಿಸಿ ರೈತರ ವಿಳಾಸ ಪಡೆದುಕೊಳ್ಳುತ್ತಾರೆ. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ರೈತರ ಮನೆ ಬಾಗಲಿಗೆ ಆ್ಯಂಬುಲೆನ್ಸ್ ಕಳಿಸಿ ಚಿಕಿತ್ಸೆ ನೀಡಲಾಗುವುದು.

ಯಾವ ಯಾವ ಜಿಲ್ಲೆಗೆ ಆ್ಯಂಬುಲೆನ್ಸ್ ನೀಡಲಾಗಿದೆ?

ಮೊದಲ ಹಂತದಲ್ಲಿ ಬೆಂಗಳೂರು ನಗರಕ್ಕೆ 3 ವಾಹನ, ಬೆಂಗಳೂರು ಗ್ರಾಮಾಂತರಕ್ಕೆ 4, ಚಿಕ್ಕಬಳ್ಳಾಪುರ ಜಿಲ್ಲೆಗೆ 10,  ಚಿತ್ರದುರ್ಗ ಜಿಲ್ಲೆಗೆ 10, ದಾವಣಗೆರೆ ಜಿಲ್ಲೆಗೆ 6, ಕೋಲಾರ ಜಿಲ್ಲೆಗೆ 8, ದಕ್ಷಿಣ ಕನ್ನಡ ಜಿಲ್ಲೆಗೆ 2, ಹಾಸನ ಜಿಲ್ಲೆಗೆ 9, ಕೊಡಗು ಜಿಲ್ಲೆಗೆ 1, ಮೈಸೂರು ಜಿಲ್ಲೆಗೆ 9 ಹಾಗೂ ಮಂಡ್ಯ ಜಿಲ್ಲೆಗೆ 8 ವಾಹನಗಳನ್ನುನೀಡಲಾಗಿದೆ.

ಮೂಕ ಪ್ರಾಣಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ- ಪ್ರಭು ಚವ್ಹಾಣ

ಮೂಕ ಪ್ರಾಣಿಗಳಿಗೂ ಮನೆ ಬಾಗಿಲಿಗೆ ತೆರಳಿ ವೈದ್ಯಕೀಯ ಸೇವೆ ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರು ಪರಿಕಲ್ಪನೆ, ಚಿಂತನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಸಂಚಾರಿ ಚಿಕಿತ್ಸಾ ವಾಹನ ಸೇವೆಯನ್ನು ಆರಂಭಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.

ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ Payment Processed ಕಾಣುತ್ತಿದೆಯೇ? ಏನಿದರ ಅರ್ಥ? ಮೊಬೈಲ್ ನಲ್ಲೇ ಚೆಕ್ ಮಾಡಿ

ಕೇಂದ್ರ ಸರ್ಕಾರದ ಅನುದಾನದಲ್ಲಿ ಜಾನುವಾರುಗಳಿಗೆ ತುರ್ತು ಸೇವೆ ಒದಗಿಸಲು ರಾಜ್ಯಕ್ಕೆ ಮಂಜೂರಾದ 275 ಆ್ಯಂಬುಲೇನ್ಸ್ ಗಳ ಪೈಕಿ 70 ವಾಹನಗಳನ್ನ ಲೋಕಾರ್ಪಣೆಮಾಡಲಾಗಿದೆ. ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರದ ಅನುದಾನದಿಂದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿತ್ತು. ಈಗ ಎರಡನವೇ ಹಂತದಲ್ಲಿ 275 ವಾಹನಗಳ ಸೇವೆಯನ್ನು ನೀಡಲಾಗುವುದು ಎಂದರು.

ಮನುಷ್ಯರಿಗಷ್ಟೇ ಆ್ಯಂಬುಲೆನ್ಸ್ ನೋಡಿದ್ದೇವೆ. ಜಾನುವಾರಿಗಳಿಗೂ ಈ ಅನುಕೂಲತೆ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಕೇಂದ್ರ ಸಚಿವ ಪರ್ಶೋತ್ತಮ ರೂಪಾಲ ತಿಳಿಸಿದರು. ಅವರು ಬ್ಯಾಂಕ್ವೇಟ್ ಹಾಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಮೂಕ ಪ್ರಾಣಿಗಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ಕೊಡುವ ಈ ಕಲ್ಪನೆ ನಿಜಕ್ಕೂ ಶ್ಲಾಘನೀಯ. ಪಶುಗಳಿಗೆ  ಈ ಅನುಕೂಲತೆ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.  ಇಧಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ವಿಶಿಷ್ಟ ಪರಿಕಲ್ಪನೆ, ಕಾಳಜಿ ಅನನ್ಯವಾದಗಿದೆ ಎಂದು ಶ್ಲಾಘಿಸಿದರು.

Leave a Reply

Your email address will not be published. Required fields are marked *