ರಾಜ್ಯ ಸರ್ಕಾರ ರಾಜ್ಯದಲ್ಲಿ ಘೋಷಿಸಿರುವ ಈ ಹದಿನಾಲ್ಕು ದಿನಗಳ ಲಾಕ್ಡೌನ್ನಲ್ಲಿ ರೈತರಿಗಾಗಲಿ ಕೃಷಿ ಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆಯಾಗದಿರಲೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಮ್ (Agri war room started) ಆರಂಭಿಸಿದೆ.
ಕೊರೇನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಹೇರಿದೆ. ಈ ಕೋವಿಡ್ ಸಂಕಟದಲ್ಲಿ ರೈತರಿಗೆ ನೆರವಾಗಲು, ತಾಂತ್ರಿಕ ಮಾಹಿತಿ, ಸಲಹೆ ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಸ್ಪಂದಿಸಲು ಅಗ್ರಿವಾರ್ ರೂಂ ಆರಂಭಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಅಗ್ರಿವಾರ್ ರೂಂ ಆರಂಭಿಸಿರುವಂತೆ ಈಗಲೂ ಅಗ್ರಿವಾರ್ ರೂಂ ಆರಂಭಿಸಿ ರೈತರಿಗೆ ಯಾವುದೇ ಅಧಿಕಾರಿಗಳು ಕೃಷಿ ಉತ್ಪನ್ನಗಳ ಸಾಗಾಣಿಕೆ, ಚಟುವಟಿಕೆ ಸಂದರ್ಭದಲ್ಲಿ ತೊಂದರೆ ಕೊಡದಂತೆ ಎಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೃಷಿ ಕೇಂದ್ರ ಕಛೇರಿಯಲ್ಲಿ ಈ ಅಗ್ರಿವಾರ್ ರೂಂ ಆರಂಭಿಸಲಾಗಿದ್ದು, ಕೃಷಿ ಕೇಂದ್ರ ಕಚೇರಿಯಲ್ಲಿ ಅಗ್ರಿ ವಾರ್ ರೂಮ್ ಮತ್ತೆ ತೆರೆದಿದ್ದು 080-22210237 ಹಾಗೂ 080-22212818 ಈ ಸಂಖ್ಯೆಗಳು ಸಹಾಯವಾಣಿಯಾಗಿ ಕಾರ್ಯನಿರ್ವಹಿಸಲಿವೆ.ಈ ಸಹಾಯವಾಣಿ ಅಗ್ರಿ ವಾರ್ ರೂಂ ಏ.28ರಿಂದ ಆರಂಭವಾಗಿದ್ದು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ.
ಇದಕ್ಕಾಗಿ ಕೃಷಿ ಪ್ರಧಾನ ಕಚೇರಿಯಲ್ಲಿ ಇಬ್ಬರು ತಾಂತ್ರಿಕ ಅಧಿಕಾರಿಗಳು ಹಾಗೂ ಒಬ್ಬ ಉಪಕೃಷಿ ನಿರ್ದೇಶಕರು ಉಸ್ತುವಾರಿಗೆ ನೇಮಿಸಲಾಗಿದೆ.
ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಅಗ್ರಿವಾರ್ ರೂಂ ಯಶಸ್ವಿಯಾಗಿ ರೈತರಿಗೆ ನೆರವಾಗಿತ್ತು. ಅ ದರಂತೆ ಈ ಬಾರಿಯೂ ಕೃಷಿ ಸಮಸ್ಯೆಗಳ ಬಗ್ಗೆ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ಈ ಅಗ್ರಿವಾರ್ ರೂಂ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ರೈತರು ಬೆಳೆದ ಹಣ್ಣು, ತರಕಾರಿ, ಹೂ ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸೇರಿದಂತೆ ಎಲ್ಲದರ ಬಗ್ಗೆಯೂ ಈ ಸಹಾಯವಾಣಿಯಿಂದ ರೈತರು ನೆರವು ಪಡೆಯಬಹುದು ಎಂದರು.
ಮುಂದಿನ ದಿನಗಳಲ್ಲಿ ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳನ್ನು ಸೇರಿಸಿ ಒಂದು ತಂಡವನ್ನಾಗಿ ಮಾಡಿ ಜಿಲ್ಲಾಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ.
Super sir