ಕೊರೋನಾ ಸೋಂಕು ದೇಶವನ್ನೇ ತಲ್ಲಣಗೊಳಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದು ಕೊರೋನಾ ಹೊಡೆದೋಡಿಸಬೇಕೆಂದು ಸರ್ಕಾರ ಜನತಾ ಕರ್ಫ್ಯೂ ಹೇರಿದ್ದ ಈ ಸಂದರ್ಭದಲ್ಲಿ ರೈತನಿಗೇಕೆ ವಿನಾಯಿತಿ ಗೊತ್ತೇ. ಸರ್ಕಾರಕ್ಕೆ ಗೊತ್ತು, ರೈತನಿಲ್ಲದಿದ್ದರೆ ಉಪವಾಸ ಬೀಳಬೇಕಾಗುತ್ತದೆ. ಅದಕ್ಕಾಗಿಯೇ ರೈತರ ಉತ್ಪನ್ನಗಳಿಗೆ ಮಾರಾಟ ಮಾಡಲು ಸಮಯಾವಕಾಶ ನೀಡಿರುವುದು. ಆದರೆ ರೈತರ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗುತ್ತಿದೆಯೇ? ಇಲ್ಲವೇ ಇಲ್ಲ. ರೈತ ಒಂದೇ ವರ್ಷ ಬೆಳೆಯುವದನ್ನು ನಿಲ್ಲಿಸಿದರೆ ದೇಶದ ಪರಿಸ್ಥಿತಿ ಹೇಗಾಗಬಹುದು? (What will happen to the country if the farmer stops growing in one year?
ತರಕಾರಿ ಬೆಲೆ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ಓದಿರಬಹುದು. ತರಕಾರಿ ಬೆಲೆ ಹೆಚ್ಚಾದರೆ ರೈತರಿಗೆ ಲಾಭ ಸಿಗಬೇಕಲ್ಲವೇ. ರೈತರೇಕೆ ತನ್ನ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲವೆಂದು ರಸ್ತೆಮೇಲೆ ಎಸೆದು ಹೋಗುತ್ತಿದ್ದಾರೆ….
ಹಗಲುರಾತ್ರಿ ದುಡಿದು ದೇಶಕ್ಕೆ ಅನ್ನ ನೀಡುವ ರೈತನ ಉತ್ಪನ್ನಗಳಿಗೆ ಒಂದೆಡೆ ಬೆಲೆಯಿಲ್ಲ. ಮತ್ತೊಂದೆಡೆ ತರಕಾರಿ, ದಿನಸಿ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತದೆ. ಇದ್ಹೇಗೆ ಸಾಧ್ಯ.
ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಜನ ಉಪವಾಸ ಬೀಳಬಾರದೆಂದು ತನ್ನ ಜೀವನವನ್ನೇ ಪಣಕ್ಕಿಟ್ಟು ನಗರಕ್ಕೆ ಬಂದು ತನ್ನ ಉತ್ಪನ್ನಗಳನ್ನು ಮಾರಲು ಬಂದರೆ ಬೆಲೆಸಿಗುತ್ತಿಲ್ಲ. ಅದೇ ದಲ್ಲಾಳಿಗಳು ರೈತರ ಹತ್ತಿರ ಅಗ್ಗದ ದರದಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ. ಒಂದುವೇಳೆ ರೈತ ಮನೆಯಲ್ಲಿಯೇ ಕುಳಿತರೆ ದೇಶಕ್ಕೆ ಅನ್ನ ಸಿಗುವುದೇ….ಬೆಳಗ್ಗೆಯೆದ್ದು ತರಕಾರಿ ಖರೀದಿಗೆ ಜನ ಮುಗಿಬೀಳುವರೇ…. ಒಮ್ಮೆ ಯೋಚಿಸಿ ಒಂದು ವೇಳೆ ರೈತ ಮನೆಯಲ್ಲಿಯೇ ಕುಳಿತರೇ ದೇಶದ ಪರಿಸ್ಥಿತಿ ಏನಾಗುತ್ತದೆ.
ಅಂಗಡಿಮುಂಗಟ್ಟುಗಳನ್ನೆಲ್ಲಾ ಬಂದ್ ಮಾಡಿಸಲಾಗಿದೆ. ದೊಡ್ಡ ದೊಡ್ಡ ಮಾಲ್ ಗಳನ್ನು ಬಾಗಿಲು ಮುಚ್ಚಿಸಲಾಗಿದೆ. ಆದರೆ ರೈತ ಮಾತ್ರ ಕೊರೋನಾ ಸಂಕಷ್ಟದಲ್ಲಿ ಜನತೆಗೆ ದಿನನಿತ್ಯ ಜೀವನಕ್ಕೆ ತೊಂದರೆಯಾಗಬಾರೆಂದು ದುಡಿಯುತ್ತಲೇ ಇದ್ದಾನೆ. ತಾನು ಕಷ್ಟುಪಡ್ಡು ದುಡಿದ ಉತ್ಪನ್ನಗಳಿಗೇಕೆ ಕವಡೆಕಾಸಿನ ಕಿಮ್ಮತ್ತು.
ರೈತನ ಹತ್ತಿರ ಹೇಗಾದರೂ ಒಂದು ವರ್ಷಕ್ಕೆ ಬೇಕಾಗುವಷ್ಟು ದವಸಧಾನ್ಯ ಇದ್ದೇ ಇರುತ್ತದೆ. ತರಕಾರಿ, ಹಣ್ಣು ಹಂಪಲ ಮಾರಲು ನಿಲ್ಲಿಸಿದರೆ ಜನರ ಪರಿಸ್ಥಿತಿ ಹೇಗಾಗಬಹುದು ಒಮ್ಮೆ ಯೋಚಿಸಿ. ನಗರದಿಂದ ಹಳ್ಳಿಗಳಿಗೆ ಓಡೋಡಿ ಹೋಗಿ, ದಯವಿಟ್ಟು ತರಕಾರಿ ಬೆಳೆದು ಕೋಡಿ ಎಂದು ಅಂಗಲಾಚುವ ಪರಿಸ್ಥಿತಿ ಖಂಡಿತವಾಗಿ ಬರುತ್ತದೆ. ಆದರೆ ರೈತ ಈ ಪರಿಸ್ಥಿತಿ ಬರಬಾರದು ಎಂದು ತಾನು ಹಗಲುರಾತ್ರಿಯೆನ್ನದೆ ದುಡಿದು ನಗರಕ್ಕೆ ಯಾವುದೋ ಟಂಟಂನಲ್ಲಿ ಬಂದು ಅನ್ನಕೊಡುತ್ತಿದ್ದಾನೆ.
ಸರ್ಕಾರವೇ ರೈತರ ಎಲ್ಲಾ ಉತ್ಪನ್ನಗಳನ್ನು ಖರೀದಿಸಿ ಅಥವಾ ಇಂತಿಷ್ಟು ಬೆಲೆಗೆ ದಲ್ಲಾಳಿಗಳು ಖರೀದಿಸಬೇಕೆಂದು ಆದೇಶ ಹೊರಡಿಸಿದರೆ ರೈತರಿಗೆ ಇನ್ನೊಬ್ಬರ ಮುಂದೆ ಕೈಚಾಚುವ ಪರಿಸ್ಥಿತಿ ಬರುವುದಿಲ್ಲ. ದೇಶದ ಬೆನ್ನೆಲಬು ಎಂದರೆ ದೇಶವೇ ಈತನ ಮೇಲೆ ಆಧಾರ. ಆದರೆ ಆಧಾರ ಸ್ಥಂಭವೇ ಬೀಳುವ ಹಂತದಲ್ಲಿದ್ದರೂ ಸಹ ಸರ್ಕಾರವೇಕೆ ಈ ಬೆನ್ನೆಲಬನ್ನು ಗಟ್ಟಿ ಮಾಡುವುದಿಲ್ಲ.
ಕೊರೋನಾದಂತಹ ಸಂಕಷ್ಟ ಸಂದರ್ಭದಲ್ಲಾದರೂ ಸರ್ಕಾರ ರೈತರ ನೆರವಿಗೆ ಬರಲಿ. ರೈತನಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಬರುತ್ತದೆ. ಇಂತಹ ಸಂಕಷ್ಚ ಕಾಲದಲ್ಲಾದರೂ ರೈತನ ಉತ್ಪನ್ನಗಳಿಗೆ ಸರ್ಕಾರ ಯೋಗ್ಯ ಬೆಲೆ ಕೊಡುವಂತಾಗಲಿ.