2021-22ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ಮೇವು ಅಭಿವೃದ್ಧಿ ಯೋಜನೆಯಡಿ ರಸಮೇವು ಘಟಕ ಸ್ಥಾಪಿಸಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯ ಕೋರಟಗೇರೆ ತಾಲೂಕಿನ ರೈತರಿಗಾಗಿ ರಸಮೇವು ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಸಿರು ಮೇವು, ಹಾಲು ಉತ್ಪಾದನೆ, ಗುಣಮಟ್ಟ ಹಾಗೂ ರಾಸುಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ರಸಮೇವು ಘಟಕ ಸ್ಥಾಪನೆಗೆ ರೈತರಿಗೆ ಸಹಾಯಧನ ನೀಡಲಾಗುವುದು.
ಒಬ್ಬ ರೈತ ಫಲಾನುಭವಿಗೆ ಪ್ಲಾಸ್ಟಿಕ್ ಶೀಟ್, ಮೇವು ಕಟ್ ಮಾಡಿ ಹರಡಲು 500 ಕೆಜಿ ಸಾಮರ್ಥ್ಯದ 4 ಸಿಲೋ ಬ್ಯಾಗ್, ಆಫ್ರಿಕನ್ ಟಾಲ್ ಮೈಜ್ 5 ಕೆಜಿಯ ಮಿನಿ ಕಟ್ ನೀಡಲಾಗುತ್ತದೆ.
ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಜಮೀನು ಪಹಣಿ (ಆರ್.ಟಿ.ಸಿ) ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು.
ರೈತರು ಕನಿಷ್ಟ 2 ರಾಸುಗಳನ್ನು ಹೊಂದಿರಬೇಕು. ಮೇವು ಕಟ್ ಮಾಡುವ ಯಂತ್ರಗಳು ಇದ್ದವರಿಗೆ ಆದ್ಯತೆ ನೀಡಲಾಗುವುದು. ಕೊರಟಗೆರೆ ತಾಲೂಕಿಗೆ ಈ ಯೋಜನೆಯಡಿ 46 ಗುರಿಗಳನ್ನು ನಿಗದಿಪಡಿಸಿದೆ. ಪರಿಶಿಷ್ಟ ಜಾತಿಗೆ 11, ಪರಿಶಿಷ್ಟ ಪಂಗಡಕ್ಕೆ 5, ಸಾಮಾನ್ಯ ವರ್ಗಕ್ಕೆ 30 ಗುರಿಗಳನ್ನು ನಿಗದಿಪಡಿಸಲಾಗಿದೆ.
ಆಸಕ್ತ ರೈತರು ಮೇ ತಿಂಗಳ 15 ರೊಳಗಾಗಿ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಹಾಗೂ ಹತ್ತಿರದ ಪಶು ಸಂಸ್ಥೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸ್ವೀಕರಿಸಿದ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ತಾಲೂಕು ಸಮಿತಿಯಲ್ಲಿ ಮಂಡಿಸಿ ಆಯ್ಕೆ ಮಾಡಲಾಗುವುದು.
ಇದನ್ನೂ ಓದಿ : ಜಮೀನಿನ ಪೋಡಿ, ಹದ್ದುಬಸ್ತು, 11 ಇ ನಕ್ಷೆ Mobileನಲ್ಲೇ ಪಡೆಯಬೇಕೇ? ಇಲ್ಲಿದೆ ಮಾಹಿತಿ
ಹೆಚ್ಚಿನ ಮಾಹಿತಿಗಾಗಿಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮೊ. 99803 51579 ಕೊರಟಗೆರೆ ಇವರನ್ನು ಸಂಪರ್ಕಿಸಲು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಸಿದ್ದನಗೌಡ ತಿಳಿಸಿದ್ದಾರೆ.
ರಸಮೇವು ಘಟಕದಿಂದಾಗುವ ಲಾಭಗಳು
ಹಸುಗಳು ಮೇವುಗಳ ಮೃದುವಾದ ಭಾಗವನ್ನು ತಿಂದು ಗಡುಸಾದ ಭಾಗವನ್ನು ಹಾಗೆಯೇ ಬಿಡುವುದರಿಂದ ಈ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಮೇವು ತುಂಡರಿಸುವ ಯಂತ್ರಗಳಿಗೆ ಅನುದಾನ ನೀಡಲಾಗುವುದು. ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿನ ಜೋಳ, ಹೈಬ್ರೀಡ್ ಜೋಳ ಹಾಗೂ ಒಣ ಮೇವನ್ನು ಈ ಯಂತ್ರದಿಂದ ತುಂಡರಿಸಿದಾಗ ರೈತರಿಗೆ ಆಗುವ ನಷ್ಟ ಕಡಿಮೆಯಾಗುತ್ತದೆ.
ಏನಿದು ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ?
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ರೈತರ ಆದಾಯ ಹೆಚ್ಚಳ ಮಾಡುವುದಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ರೈತರು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಲು ಪ್ರೇರೇಪಿಸಲಾಗುವುದು.