ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Fasal Bima Yojana status ) 2019 -20 ನೇ ಸಾಲಿನ ಮುಂಗಾರಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು, ರಾಜ್ಯದ ಕೆಲವು ರೈತರ ಖಾತೆಗೆ ಈಗಾಗಲೇ ಜಮೆಯಾಗಿದೆ. ಇನ್ನೂ ಕೆಲವು ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಫಸಲ್ ಬಿಮಾ ಯೋಜನೆಯ ಹಣ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಸ್ಟೇಟಸ್ ಮೂಲಕ ತಿಳಿದುಕೊಳ್ಳಬಹುದು.
ಹೌದು, ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ನಮೂದಿಸಿದರೆ ಸಾಕು ನಿಮ್ಮ ಯಾವ ಖಾತೆಗೆ ಫಸಲ್ ಬಿಮಾ ಯೋಜನೆ ಹಣ ಜಮಾ ಆಗಿದ್ದು, ಯಾವಾಗ ಜಮೆಯಾಗಿದ್ದು ಎಂಬುದನ್ನು ಕ್ಷಣಾರ್ಧದಲ್ಲಿ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.
ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.samrakshane.karnataka.gov.in/ ಅಥವಾ SAMRAKSHANE-KARNATAKA :: Crop Insurance Application ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ ವೆಬ್ ಪೇಟ್ ಓಪನ್ ಆಗುತ್ತದೆ. ಯಾವ ವರ್ಷದ ವಿಮೆ ನೋಡಬೇಕಾಗಿದೆ ಖಾರೀಫ್ ಅಥವಾ ರಾಬಿ ಬೆಳೆ ಇವರೆಡರಲ್ಲಿ ಯಾವುದು ನೋಡಬೇಕಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ 2019-20 ಹಾಗೂ ಖಾರೀಫ್ ಅನ್ನು ಆಯ್ಕೆ ಮಾಡಿ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ ಎಂಬ ಕಾಲಮ್ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ ಕ್ಲೀಕ್ ಮಾಡೇಬೇಕು.
ಇಲ್ಲಿ ನಿಮಗೆ ಮೂರು ಆಯ್ಕೆಗಳು ಬರುತ್ತವೆ ಒಂದು ಪ್ರೊಪೋಸಲ್ ನಂಬರ್, ಎರಡನೆಯದ್ದು ಮೊಬೈಲ್ ನಂಬರ್, ಹಾಗೂ ಮೂರನೆಯದ್ದು ಆಧಾರ್ ನಂಬರ್. ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ಮೊಬೈಲ್ ನಂಬ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ನಿಮಗೆ ಯಾವಾಗ ಹಣ ಜಮೆಯಾಗಿದೆ, ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬುದನ್ನು ನೋಡಬಹುದು.
ಅಪ್ಲಿಕೇಷನ್ ಸ್ಟೇಟಸ್ ನೋಡಲು https://pmfby.gov.in/ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಅಪ್ಲಿಕೇಷನ್ ಸ್ಟೇಟ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ರೆಸಿಪ್ಟ್ ನಂಬರ್ ಹಾಕಬೇಕು. ಕ್ಯಾಪ್ಚಾ ಕೋಡ್ ನಮೂದಿಸಿ ನಿಮ್ಮ ಅಪ್ಲಿಕೇಷನ್ ಸ್ಟೇಟಸ್ ನೋಡಬಹುದು.
ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ?
ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಈ ಯೋಜನೆಯ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ್ದ ರೈತರಿಗೆ ಬೆಳೆನಷ್ಟ ಮತ್ತು ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಆದರೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಎಕರೆವಾರು ವಿಮಾ ಮೊತ್ತವನ್ನು ಪಾವತಿ ಮಾಡುವ ಯೋಜನೆ ಇದಾಗಿದೆ.
ಪ್ರಕೃತಿ ವಿಕೋಪಕ್ಕೆ ವಿಮೆ ಪರಿಹಾರ:
ಈ ಯೋಜನೆಯಡಿ 2020 ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ (ಇನಂಡೇಷನ್)ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಫಸಲ್ ಬಿಮಾ ಯೋಜನೆಯಡಿ ಒಳಪಡಿಸಲಾಗುವುದು. ಆದರೆ, ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿಭಾಗವಹಿಸಲು ಇಚ್ಛಿಸದಿದ್ದರೆ ಈ ಕುರಿತು ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ನಿಗದಿತ ನಮೂನೆಯಲ್ಲಿಮುಚ್ಚಳಿಕೆ ಪತ್ರವನ್ನು ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ ಮಟ್ಟದ ಬೆಳೆಗಳಿಗೆ ಹಾಗೂ ಹೋಬಳಿ ಮಟ್ಟದ ಬೆಳೆಗಳಿಗೆ ಹತ್ತಿರದ ಬ್ಯಾಂಕುಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಥವಾ ತಮ್ಮ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.