ರೈತರಿಗೆ ಉಳುಮೆಯಿಂದ ಹಿಡಿದು ಕಟಾವಿನವರೆಗೂ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡದರದಲ್ಲಿ 3 ಲಕ್ಷ ರೂಪಾಯಿಯಯವರೆಗೆ ಸಾಲ ಸೌಲಭ್ಯ ಸಿಗಲಿದೆ. ಹೌದು ರೈತರ ಕೃಷಿ ಚಟುವಟಿಕೆಗೆ ಸಹಾಯವಾಗಲೆಂದು, ಬಿತ್ತನೆ ಬೀಜ ಖರೀದಿಗೆ, ಔಷಧ ಸಿಂಪರಣೆಗೆ ಸಹಾಯವಾಗಲೆಂದು ಪ್ರಾಥಮಿಕ ಕೃಷಿ ಪತ್ತಿರ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
ಕೃಷಿ ಚಚುವಟಿಕೆಗಷ್ಟೇ ಅಲ್ಲ, ರೈತರ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ 3 ಲಕ್ಷ ರೂಪಾಯಿಯವರೆಗೆ ಸಾಲ ಸಿಗಲಿದೆ. ಆದರೆ ಎಲ್ಲಾ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾಲ ಸಿಗುವುದಿಲ್ಲ. ಈ ಬ್ಯಾಂಕುಗಳಿಂದ ಸಾಲ ಪಡೆಯಬೇಕಾದರೆ ರೈತರು ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿದರೆ ಮಾತ್ರ ಅವರಿಗೆ ಸಾಲ ಸೌಲಭ್ಯ ಸಿಗಲಿದೆ. ರೈತರು ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಹೊಂದಿರುವ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬೇರೆ ಕಡೆ ಸಾಲ ಪಡೆದಿರಬಾರದು.
ರೈತನು ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿಸಹಾಯಧನ ಅನ್ವಯವಾಗುತ್ತದೆ. ಒಂದು ವೇಳೆ ರೈತನು ವಾಸಿಸುತ್ತಿರುವ ಪ್ರದೇಶದಲ್ಲಿ ಸಂಘವು ಇಲ್ಲದೆ ಇದ್ದರೆ ಅಥವಾ ಸಾಲ ನೀಡಲು ಸಂಘವು ಸಶಕ್ತರಾಗಿಲ್ಲದಿದ್ದರೆ ಅಂತಹ ಸಂಘದಿಂದ ನಿರಪೇಕ್ಷಣಾ ಪತ್ರ ಪಡೆದು ಸಂಬಂಧಿಸಿದ ಡಿಸಿಸ ಬ್ಯಾಂಕುಗಳ ಶಾಖೆಗಳಲ್ಲಿ ಸಾಲ ಪಡೆಯಬಹುದು ರೈತ ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಸಾಲ ಪಡೆಯಲು ರೈತರಿಗೆ ಯಾವ ಯಾವ ದಾಖಲೆ ಬೇಕು?
ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು. ರೈತರ ಬಳಿ ಪಹಣಿ ಇರಬೇಕು ಆಧಾರ್ ಕಾರ್ಡ್ ಇರಬೇಕು. ರೈತರು ಯಾವ ಬ್ಯಾಂಕಿನಿಂದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಕಾಲಕಾಲಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ಮಿತಿ ಹೆಚ್ಚಳ
ರಾಜ್ಯದ ರೈತರಿಗೆ ಶೇಕಡಾ 3 ರ ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವದಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು ಸರ್ಕಾರವು 2008 ರಲ್ಲಿ ಅನುಷ್ಠಾನಗೊಳಿಸಿತು. 2012-13ನೇ ಸಾಲನಲ್ಲಿ 1 ಲಕ್ಷ ರೂಪಾಯಿಯವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. 2013-14ನೇ ಸಾಲಿನಿಂದ 2 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಯಿತು. 2014-15ನೇ ಸಾಲಿನಿಂದ 2 ಲಕ್ಷ ರೂಪಾಯಿಯಿಂದ ಮೂರು ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಈಗ ಸದ್ಯ ರಾಜ್ಯದಲ್ಲಿ 3 ಲಕ್ಷ ರೂಪಾಯಿಯವರೆಗೆ ಅಲ್ಪಾವಧಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ.
ದೀರ್ಘಾವಧಿ ಸಾಲ ಪಡೆಯುವ ರೈತರಿಗೂ ಕಡಿಮೆ ಬಡ್ಡಿದರದಲ್ಲಿಸಾಲ ನೀಡಲಾಗುವುದು. ಶೇ 3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿಯವರೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡಲಾಗುವುದು. ಸಾಲ ನೀಡುವ ಗುರಿಯಲ್ಲಿ ಶೇ. 24.10 ರಷ್ಟು ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಲ ನೀಡುವುದು ಕಡ್ಡಾಯವಾಗಿದೆ.