ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ನಿಟ್ಟಿನಲ್ಲಿ ಇದೇ ತಿಂಗಳು ಅಂತ್ಯಕ್ಕೆ ಹೊಸ ಮರಳು ನೀತಿ (New sand policy) ಜಾರಿಗೆ ತರಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಅವರು  ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹೊಸ ನೀತಿಯನ್ವಯ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಪ್ರತಿ ಟನ್ ಗೆ 100 ರೂಪಾಯಿ ದರದಲ್ಲಿ ಮರಳು ಪೂರೈಸಲಾಗುವುದು.  ಆಯಾ ಭಾಗದ ಗ್ರಾಪಂ, ನಗರಸಭೆಯ ಕಟ್ಟಡ ಅನುಮತಿಯಲ್ಲಿ ತೋರಿಸಿದಂತೆ ನಿಗದಿತ ಮರಳು ಪೂರೈಸಲಾಗುವುದು.ಸರ್ಕಾರದಿಂದ  ಟೆಂಡರ್ ಕರೆಯಲಾದ ಕಾಮಗಾರಿಗಳಿಗೆ ಮರಳು ಸಂಗ್ರಹ ಹೊರತುಪಡಿಸಿ ಗುತ್ತಿಗೆದಾರ ಕಾರ್ಯ ನಿರ್ವಹಿಸಿದಂತೆ ಹಂತ ಹಂತವಾಗಿ ಪೂರೈಸಲಾಗುವುದು.

ಸಾರ್ವಜನಿಕರ ಉಪಯೋಗದ ಕುಡಿಯುವ ನೀರಿನ ಸಂಬಂಧಿಸಿದ ಸ್ಥಳಗಳಲ್ಲಿ ಹಳ್ಳ, ಕೆರೆ ಹಾಗೂ ಆಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಮರಳು ತೆಗೆಯದಂತೆ ನಿರ್ಬಂಧ ಹೇರಲಾಗುತ್ತಿದೆ. ಮರಳು ದರವನ್ನು ಪ್ರತಿದಿನ ಬಂಗಾರ, ಬೆಳ್ಳಿ ದರ ಪ್ರಕಟಗೊಂಡಂತೆ ಪ್ರತಿ ವಾರಕ್ಕೊಮ್ಮೆ ಮರಳಿನ ದರ ಪಟ್ಟಿ ನೀಡಲಾಗುವುದು. ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುವುದರ ಜೊತೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಮರಳು ದೊರೆಯಲಿದೆ ಎಂದು ತಿಳಿಸಿದರು.

ಗಣಿಗಾರಿಕೆಯಲ್ಲಿ ಸ್ಟೋಟಗೊಂಡು ಆಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡುವ ಸ್ಕೂಲ್ ಆಫ್ ಮೈನಿಂಗ್ ಕೇಂದ್ರವನ್ನು ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಚಿತ್ರದುರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ 50 ಎಕರೆ ಜಮೀನು ಖರೀದಿಸಲಾಗಿದೆ. ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು. ಗಣಿಗಾರಿಕೆಯಲ್ಲಿ ಅಕ್ರಮ ತಡೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ನೌಕರರಿಗೂ ಸಮವಸ್ತ್ರ ವಾಕಿಟಾಕಿ ಪೂರೈಸಲಾಗುತ್ತಿದೆ. ನಿವೃತ್ತ ಯೋಧರನ್ನು ಈ ಕಾರ್ಯಕ್ಕೆ ನೇಮಿಸಲಾಗುತ್ತಿದೆ.

Leave a Reply

Your email address will not be published. Required fields are marked *