ಬೆಳೆಹಾನಿಯಾದ ರೈತರಿಗೆ ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದ ಸಿಎಂ: ರೈತರ ಖಾತೆಗೆ ಶೀಘ್ರ ಬಾಕಿ ಹಣ ಜಮೆ

Written by By: janajagran

Updated on:

ಅತೀವೃಷ್ಟಿಯಿಂದ ಬೆಳೆಹಾನಿಯಾದ ರೈತರಿಗೆ ರಾಜ್ಯ ಸರ್ಕಾರವು  ಹೆಚ್ಚುವರಿಯಾಗಿ ಬೆಳೆ ಪರಿಹಾರ  ಘೋಷಣೆ ಮಾಡಿದೆ. ಹೌದು, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಅತೀವೃಷ್ಟಿ ಪರಿಹಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಅತೀವೃಷ್ಟಿಯಿಂದಾದ ರೈತರ ಬೆಳೆ ಹಾನಿಗೆ ಹೆಚ್ಚುವರಿಯಾಗಿ ಪರಿಹಾರ ನೀಡಲಾಗುವುದು. ಈಗಾಗಲೇ ಪರಿಹಾರ ಪಡೆದಿರುವ ರೈತರ ಖಾತೆಗೆ ಶೀಘ್ರವಾಗಿ ಬಾಕಿ ಹಣವನ್ನು ಜಮೆ ಮಾಡಲಾಗುವುದು. ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ರಾಜ್ಯವ್ಯಾಪಿ ಹೆಚ್ಚು ಮಳೆಯಾಗಿದೆ. ಬರಪೀಡಿತ ಜಿಲ್ಲೆಗಳಲ್ಲಿ ಕೆರೆ ಕಟ್ಟೆತುಂಬಿ ಒಡೆದು ಹೋಗಿದೆ. ಮುಖ್ಯವಾಗಿ ರೈತರ ಬೆಳೆ ಹಾನಿಯಾಗಿದೆ. ಸಾಕಷ್ಟು ರೈತರ ಬೆಳೆಯು ರಾಶಿ ಮಾಡುವ ಸಂದರ್ಭದಲ್ಲಿ ಹಾನಿಯಾಗಿದೆ.  ಮಳೆಯಿಂದ ಹಾನಿ ಸಂಭವಿಸಿದ ಕೂಡಲೇ ಜಂಟಿ ಸರ್ವೇ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪರಿಹಾರ ತಂತ್ರಾಂಶದಲ್ಲಿ ರೈತರ ಮಾಹಿತಿಯನ್ನು 24 ಗಂಟೆಯೊಳಗೆ  ಅಪ್ಲೋಡ್ ಮಾಡಲು  ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಜಂಟಿ ಸಮೀಕ್ಷೆ ವರದಿ ಪ್ರಕಾರ 10 ಲಕ್ಷ  ರೈತರಿಗೆ 969 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿ ಬೆಳೆಹಾನಿ, ಜೀವಹಾನಿ, ಮನೆಹಾನಿ ಎಲ್ಲವೂ ಸೇರಿವೆ. ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದ ಹಣವನ್ನ್ನು ಇದೇ ಮೊದಲ ಬಾರಿಗೆ ಅತೀ ಶೀಘ್ರದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಮನೆ ಬಿದ್ದವರಿಗೆ 1 ಲಕ್ಷ ರೂಪಾಯಿ ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಪರಿಹಾರದ ಮೊತ್ತ ಹೆಚ್ಚಳ

ರಾಜ್ಯದಲ್ಲಿ ಬೆಳೆಹಾನಿಯಾದ ರೈತರಿಗೆ ಪರಿಹಾರ ಹೆಚ್ಚಿಸಬೇಕೆಂಬ ಚಿಂತನೆಯಿತ್ತು. ರಾಜ್ಯದ ರೈತರಿಗೆ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ ಎಂದು ಸದಸ್ಯರು ಆಗ್ರಹಿಸಿದ್ದರು. ಶಾಸಕ ಅಭಿಪ್ರಾಯದಂತೆ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡುತ್ತಿದೆ. ಇದುವರೆಗೆ ಒಣಭೂಮಿಗೆ ಪ್ರತಿ ಹೆಕ್ಟೇರಿಗೆ 6800 ರೂಪಾಯಿ ಇತ್ತು.ಈಗ ಹೆಚ್ಚುವರಿಯಾಗಿ 6800 ರೂಪಾಯಿ ನೀಡಲಾಗುತ್ತಿದೆ. ಅಂದರೆ ಪ್ರತಿ ಹೆಕ್ಟೇರಿಗೆ 13600 ರೂಪಾಯಿ ಬೆಳೆ ಪರಿಹಾರ ನೀಡಲಾಗುವುದು. ಇದೇ ರೀತಿ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರಿಗೆ 13500 ರೂಪಾಯಿ ಪರಿಹಾರ ನೀಡಲಾಗಿತ್ತು. ಈಗ ಹೆಚ್ಚುವರಿಯಾಗಿ 11500 ರೂಪಾಯಿ ಸೇರಿಸಿ ಒಟ್ಟು ಪ್ರತಿ ಹೆಕ್ಟೇರು ನೀರಾವರಿ ಜಮೀನಿಗೆ 25 ಸಾವಿರ ರೂಪಾಯಿ ನೀಡಲಾಗುವುದು. ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆಗೆ ನೀಡುತ್ತಿದ್ದ 18 ಸಾವಿರ ರೂಪಾಯಿ ಪರಿಹಾರಕ್ಕೆ 10 ಸಾವಿರ ರೂಪಾಯಿ ಹೆಚ್ಚಿಸಿ 28 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪರಿಹಾರ ಸ್ಟೇಟಸ್ ನೋಡಲು ಈ  https://landrecords.karnataka.gov.in/PariharaPayment/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಸರ್ಕಾರದ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.

ಈ ವರ್ಷದ ಸ್ಟೇಟಸ್ ನೋಡಲು 2021-22 ಆಯ್ಕೆ ಮಾಡಿಕೊಳ್ಳಬೇಕು.. ಕೆಳಗಡೆ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು

ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

ಈ ವರ್ಷದಲ್ಲಿ ಎಷ್ಟು ಎಕರೆಗೆ ಬೆಳೆ ಪರಿಹಾರ ನೀಡಲಾಗಿದೆ. ಯಾವ ಬ್ಯಾಂಕಿನಲ್ಲಿ ಹಣ ಜಮೆಯಾಗಿದೆ. ಯಾವ ಬೆಳೆಗೆ ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ಕಾಣುತ್ತದೆ.

Leave a comment