ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡವರಿಗೆ ನೀಡಲಾಗುತ್ತಿರುವ ಮಾಸಿಕ ಉಚಿತ ಯೂನಿಟ್ ಸಹಾಯಧನವನ್ನು ಹೆಚ್ಚಿಸಲಾಗಿದೆ.

ಹೌದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬದವರಿಗೆ ಇದಕ್ಕಿಂತ ಮುಂಚಿತವಾಗಿ 40 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಈಗ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಹೆಚ್ಚಳ ಮಾಡಲಾಗಿದೆ.

ಈ ಕುರಿತು ಮೇ 1 ರಿಂದಲೇ ಪುರ್ವಾನ್ವಯವಾಗುವಂತೆ ಉಚಿತ ವಿದ್ಯುತ್ ಸೇವೆ ಒದಗಿಸಲು ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.  ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿದ ಇಂಧನ ಇಲಾಖೆಯು ಈ ಹಿಂದೆ 40 ಯೂನಿಟ್ ಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿತ್ತು. ಇನ್ನೂಮುಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಬಿಪಿಎಲ್ ಕುಟುಂಬದವರಿಗೆ ಮಾಸಿಕ 75 ಯೂನಿಟ್ ವರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು.

ಈ ಫಲಾನುಭವಿಗಳಿಗೆ ಪೂರೈಸಿದ ವಿದ್ಯುತ್ ನ ಅಂಕಿಅಂಶಗಳನ್ನು ಎಸ್ಕಾಂಗಳು ಸರ್ಕಾರಕ್ಕೆ ಸಲ್ಲಿಸಬೇಕು. ಬಳಿಕ ಇಆರ್.ಸಿ ನಿಯಮಗಳಡಿ ಸಹಾಯಧನ ಮೊತ್ತವನ್ನು ಸರ್ಕಾರ ಭರಿಸಲಿದೆ. ಪ್ರತಿ ತಿಂಗಳು ಬಿಲ್ ಆದಾಗ ಗ್ರಾಹಕರು ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು.ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಬಿಲ್ ಮೊತ್ತವನ್ನು ಫಲಾನುಭವಿಗಳಿಗೆ ಮರುಪಾವತಿ ಮಾಡಲಾಗುವುದು ಎಂದು ಇಂಧನ ಇಲಾಖೆ ತಿಳಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇತ್ತೀಚೆಗೆ ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನರಾಂ ಜಯಂತಿ ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಭಾಗ್ಯ ಜ್ಯೋತಿ, ಕುಟೀರಜ್ಯೋತಿ  ಯೋಜನೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನೀಡುವ ಉಚಿತ ವಿದ್ಯುತ್ ಅನ್ನು 40 ಯೂನಿಟ್ ನಿಂದ 75 ಯೂನಿಟ್ ಗೆ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಇಂಧನ ಸಚಿವ ವಿ. ಸುನೀಲ್ ಕುಮಾರ ಉಚಿತ ವಿದ್ಯುತ್ ಪ್ರಮಾಣ ಹೆಚ್ಚಳಕ್ಕೆ ಕ್ರಮವಹಿಸಲು ಸೂಚನೆ ನೀಡಿದ್ದರು. ಈ ಸಂಬಂಧ ಕೆಲವು ಷರತ್ತುಗಳೊಂದಿಗೆ ಆದೇಶ ಹೊರಬಿದ್ದಿದೆ. ಈ ನಿಯಮ ಮೇ 1 ರಿಂದಲೇ ಜಾರಿಗೆ ಬರಲಿದೆ. ಏಪ್ರೀಲ್30ರವರೆಗೆ ಇರುವ ಬಾಕಿ ಮೊತ್ತವನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ.

ಗ್ರಾಹಕರು ಮನೆಗೆ ಬಳಸುವ ವಿದ್ಯುತ್ ಬಿಲ್ ಅನ್ನು ಪೂರ್ತಿಯಾಗಿ ಪಾವತಿ ಮಾಡಬೇಕು. ಅನಂತರ ಅವರ ಬ್ಯಾಂಕ್ ಖಾತೆಗೆ 75 ಯೂನಿಟ್ ಗಳ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ : ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಗ್ರಾಹಕರು ಎಸ್ಕಾಂಗಳಿಗೆ ಆಧಾರ್ ಸಂಖ್ಯೆ ನೀಡಿ ಲಿಂಕ್ ಮಾಡಿಸಬೇಕು. ಕಂದಾಯ ಇಲಾಖೆ ನೀಡಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಹ ನೀಡಬೇಕು. ಬ್ಯಾಂಕ್ ಖಾತೆಯ ವಿವರಗಳನ್ನು ಎಸ್ಕಾಂಗಳಿಗೆ ನೀಡಬೇಕು.ಇದರೊಂದಿಗೆ ಬಿಪಿಎಲ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.75 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸಿದರೆ ಆಗ ಹೆಚ್ಚಿನ ಬಳಕೆಗೆದರ ಪಾವತಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನೇನು ಷರತ್ತು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಸದಸ್ಯರುಗಳಿಗೆ ವಿದ್ಯುತ್ ಸಂಪರ್ಕಗಳ ಮೀಟರ್ ರೀಡಿಂಗ್ ಕಡ್ಡಾಯವಾಗಿದೆ. ಆಧಾರ್ ಹಾಗೂ ಪಡಿತರ ಚೀಟಿ ಕಡ್ಡಾಯವಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆರ್. ಡಿ ನಂಬರ್ ಇರಬೇಕು. ಬಳಕೆದಾರರು ಮಾಸಿಕ ವಿದ್ಯುತ್ ಬಿಲ್ ನ ಪೂರ್ಣ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಗ್ರಾಹಕರ ಖಾತೆಗೆ ಸಬ್ಸಿಡಿ ಹಣವನ್ನು ಡಿಬಿಡಿಯಡಿ ಪಾವತಿಸಲಾಗುವುದು.

ಹೆಚ್ಚಿನ ಮಾಹಿತಿಗಾರಿ ಗ್ರಾಹಕರು ಹತ್ತಿರದ ವಿದ್ಯುತ್ ಪೂರೈಕೆ ಇಲಾಖೆಗೆ ಸಂಪರ್ಕಿಸಲು ಕೋರಲಾಗಿದೆ

Leave a Reply

Your email address will not be published. Required fields are marked *