ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶನಿವಾರ ಎರಡನೇ ಹಂತದ ಲಾಕ್ಡೌನ್ ಸಡಿಲಿಕೆ ಘೋಷಣೆ ಮಾಡಿದೆ. ಜುಲೈ 5 ರವರೆಗೆ ಹೊಸ ಮಾರ್ಗಸೂಚಿ ಮುಂದುವರೆಯಲಿದೆ (Lockdown guideline announced in Karnataka) ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, 16 ಜಿಲ್ಲೆಗಳಲ್ಲಿ ಶೇ. 5ರಷ್ಟು ಪಾಸಿಟಿವಿಟಿ ದರ ಇರುವ ಕಾರಣದಿಂದಾಗಿ ಈ 16 ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಪಾಸಿಟಿವಿಟಿ ದರದ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯನ್ನು ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಶೇ. 5 ರಷ್ಟು, 13 ಜಿಲ್ಲೆಗಳಲ್ಲಿ ಶೇ. 5-10, ಮೈಸೂರಿನಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ. ಶೇ. 5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ. ಶೇ. 5 ಮತ್ತು 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಅನ್ವಯವಾಗಲಿದೆ ಎಂದರು.
ಶೇ. 5 ರಷ್ಟು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚು ಸಡಿಲಿಕೆ
ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, (ಬಿಬಿಎಂಪಿ ಸೇರಿದಂತೆ) ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಈ ಕೆಳಗಿನ ಮಾರ್ಗಸೂಚಿ ಅನ್ವಯವಾಗಲಿದೆ.
ಎಲ್ಲಾ ಅಂಗಡಿಗಳು ಸಾಯಂಕಾಲ 5ರವರೆಗೆ ತೆರೆದಿರಲು ಅವಕಾಶವಿದೆ.
ಸೋಮವಾರದಿಂದ ರಾಜ್ಯಾದ್ಯಂತ ಜ್ಯುವೆಲರಿ ಶಾಪ್ ಗಳನ್ನು ತೆರೆಯಲು ಅವಕಾಶವಿದೆ.
ಎಸಿ ಚಾಲನೆ ಇಲ್ಲದೆ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ (ಮದ್ಯಪಾನವಿಲ್ಲದೆ) ಕುಳಿತು ಆಹಾರ ಸೇವಿಸಲು ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಶೇ. 50 ರ ಆಸನಗಳಲ್ಲಿ ಮಾತ್ರ ಅವಕಾಶ.
ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ.
ಬಸ್, ಮೆಟ್ರೋ ಶೇ. 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು. ಹೊರಾಂಗಣ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೆ ಕ್ರೀಡೆಗೆ ಅವಕಾಶ
ಸರ್ಕಾರಿ ಕಚೇರಿಗಳು ಶೇ. 50 ಸಾಮರ್ಥ್ಯದೊಂದಿಗೆ ಗ್ರಾಹಕ ಸೇವೆ, ಜೀಮ್ ಗಳಲ್ಲಿ ಶೇ. 50 ರಷ್ಟು ಮಂದಿಗೆ ಅವಕಾಶ ನೀಡಲಾಗಿದೆ. ಎಸ್. ಬಳಸುವಂತಿಲ್ಲ.ಸಿನೆಮಾ ಮಂದಿರ ಹಾಗೂ ದೇವಾಲಯಗಳಲ್ಲಿ ನಿರ್ಬಂಧ ಮುಂದುವರಿಯಲಿದೆ. ಮಂದಿರ ಚರ್ಚ್ ತೆರೆಯಲು ಅವಕಾಶವಿಲ್ಲ. ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿದರ ಇರುವ ಜಿಲ್ಲೆಗಳಲ್ಲಿ ಹಿಂದಿನ ಮಾರ್ಗಸೂಚಿ ಮುಂದುವರಿಕೆ
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಜೂನ್ 11 ರಂದು ತಿಳಿಸಿದ ಮಾರ್ಗಸೂಚಿಗಳು ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ ವಹಿವಾಟಿಗೆ ಅವಕಾಶ ನೀಡಲಾಗಿದೆ.
ನಿರ್ಬಂಧ ಯಾವುದಕ್ಕೆ
ಈಜುಕೊಳ, ಸಭೆ, ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾಸ್ಥಳ, ಶಿಕ್ಷಣ ಸಂಸ್ಥೆ, ಸಿನೆಮಾ ಮಂದಿರ, ಶಾಪಿಂಗ್ ಮಾಲ್, ಪಬ್, ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ನಿರ್ಬಂಧ ಮುಂದುವರೆಯಲಿದೆ.